ಪೌರಕಾರ್ಮಿಕರ ಆರೋಗ್ಯಕ್ಕೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವಿಶೇಷ ಕಾಳಜಿ: ರಾಯಪುರಂನಲ್ಲಿ ತಪಾಸಣಾ ಶಿಬಿರ

ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮಾನ್ಯ ಆಯುಕ್ತರ ನಿರ್ದೇಶನದಂತೆ, ನಗರದ ನೈರ್ಮಲ್ಯ ಹಾಗೂ ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸುವ ಪೌರಕಾರ್ಮಿಕರ ಆರೋಗ್ಯ ಸುಧಾರಣೆಗಾಗಿ ಚಾಮರಾಜಪೇಟೆ ವಿಭಾಗದ ರಾಯಪುರಂ ವಾರ್ಡ್ನ ಅಂಬೇಡ್ಕರ್ ಭವನದಲ್ಲಿ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
”ಆರೋಗ್ಯವಂತ ಪೌರಕಾರ್ಮಿಕರೇ ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರ ಬೆಂಗಳೂರಿನ ಭದ್ರ ಅಡಿಪಾಯ” ಎಂಬ ಆಶಯದೊಂದಿಗೆ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ಸಮಗ್ರ ಆರೋಗ್ಯ ತಪಾಸಣೆ: ಶಿಬಿರದಲ್ಲಿ ಒಟ್ಟು 76 ಪೌರಕಾರ್ಮಿಕ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಔಷಧಿಗಳನ್ನು ವಿತರಿಸಲಾಯಿತು.
ಹೆಚ್ಚಿನ ರಕ್ತ ಪರೀಕ್ಷೆಗಳು: ತಪಾಸಣೆ ವೇಳೆ ಹೊಸದಾಗಿ ಮಧುಮೇಹ (Sugar) ಹಾಗೂ ರಕ್ತಹೀನತೆ (Anemia) ಲಕ್ಷಣಗಳು ಕಂಡುಬಂದ ಸಿಬ್ಬಂದಿಗೆ, ರೋಗ ದೃಢೀಕರಣಕ್ಕಾಗಿ ಹೆಚ್ಚಿನ ರಕ್ತ ಪರೀಕ್ಷೆಗಳಿಗೆ ಸೂಚಿಸಲಾಯಿತು.
ರೇಬೀಸ್ ತಡೆಗೆ ಲಸಿಕೆ ಜಾಗೃತಿ: ಶ್ವಾನಗಳಿಂದ ಎದುರಾಗಬಹುದಾದ ರೇಬೀಸ್ ಅಪಾಯವನ್ನು ತಡೆಯಲು, ಪೌರಕಾರ್ಮಿಕರು ‘ಪೂರ್ವ-ಸಂಪರ್ಕ ರಕ್ಷಣಾತ್ಮಕ ಲಸಿಕೆ’ (Pre-exposure Prophylaxis) ಪಡೆದುಕೊಳ್ಳುವಂತೆ ಪ್ರೇರೇಪಿಸಲಾಯಿತು.
ಆರೋಗ್ಯ ಅರಿವು ಕಾರ್ಯಕ್ರಮ: ಡೆಂಗ್ಯೂ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳು, ಕ್ಷಯರೋಗ (TB) ಹಾಗೂ ಕ್ಯಾನ್ಸರ್ನ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚುವ ಮತ್ತು ಮುನ್ನೆಚ್ಚರಿಕೆ ವಹಿಸುವ ಕುರಿತು ಸಾರ್ವಜನಿಕ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ನಗರ ಪಾಲಿಕೆಯು ಇಂತಹ ನಿರಂತರ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲೂ ಮುಂದುವರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




