ಕುಮಟಾ: ರಾಷ್ಟ್ರಮಟ್ಟದ ವಾಲಿಬಾಲ್ ಸಮರ; ಇಂಡಿಯನ್ ಆರ್ಮಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಹೆಗಡೆ ಶಾಂತಿಕಾಂಬಾ ತಂಡ

ಕುಮಟಾ: ಇಲ್ಲಿನ ಹೆಗಡೆ ಗ್ರಾಮದ ಶ್ರೀ ಶಾಂತಿಕಾಂಬಾ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಅತಿಥೇಯ ‘ಹೆಗಡೆ ಶಾಂತಿಕಾಂಬಾ’ ತಂಡವು ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಇಂಡಿಯನ್ ಆರ್ಮಿ ತಂಡವನ್ನು ಸೋಲಿಸಿ ಕ್ರೀಡಾಭಿಮಾನಿಗಳ ಮನಗೆದ್ದಿದೆ.
ಶಾಂತಿಕಾಂಬಾ ಫ್ರೆಂಡ್ಸ್ ಗ್ರೂಪ್ ಹಮ್ಮಿಕೊಂಡಿದ್ದ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶದ ನಾನಾ ಭಾಗಗಳ ಹೆಸರಾಂತ ತಂಡಗಳು ಭಾಗವಹಿಸಿದ್ದವು. ತಡರಾತ್ರಿ ನಡೆದ ಅಂತಿಮ ಪಂದ್ಯದಲ್ಲಿ ಗಜಾನನ ಪೈ ಮಾಲೀಕತ್ವದ ಶಾಂತಿಕಾಂಬಾ ತಂಡ ಹಾಗೂ ರಾಜು ಮಾಸ್ತಿಹಳ್ಳ ಮಾಲೀಕತ್ವದ ಇಂಡಿಯನ್ ಆರ್ಮಿ ತಂಡ ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ನಡೆದ ತುರುಸಿನ ಪೈಪೋಟಿಯಲ್ಲಿ ಶಾಂತಿಕಾಂಬಾ ತಂಡವು ಅದ್ಭುತ ಪ್ರದರ್ಶನ ನೀಡಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಇಂಡಿಯನ್ ಆರ್ಮಿ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿಜೇತ ಶಾಂತಿಕಾಂಬಾ ತಂಡಕ್ಕೆ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ ಅವರು 1 ಲಕ್ಷ ರೂಪಾಯಿ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಹಸ್ತಾಂತರಿಸಿ ಅಭಿನಂದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ನಾಯ್ಕ, ಕ್ರೀಡಾಕೂಟದ ಗೌರವಾಧ್ಯಕ್ಷ ರಾಮನಾಥ ಶಾನಭಾಗ ಸೇರಿದಂತೆ ಸ್ಥಳೀಯ ಗಣ್ಯರು ಉಪಸ್ಥಿತರಿದ್ದು, ವಿಜೇತ ಹಾಗೂ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಹೊನಲು ಬೆಳಕಿನಲ್ಲಿ ನಡೆದ ಈ ಕ್ರೀಡಾಕೂಟವನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಜಮಾಯಿಸಿದ್ದರು. ಅಚ್ಚುಕಟ್ಟಾದ ಆಯೋಜನೆ ಮತ್ತು ರೋಚಕ ಪಂದ್ಯಗಳು ಕುಮಟಾದ ಕ್ರೀಡಾ ಇತಿಹಾಸದಲ್ಲಿ ಈ ಪಂದ್ಯಾವಳಿಯನ್ನು ಸ್ಮರಣೀಯವಾಗಿಸಿದೆ.



