ಚಾಮರಾಜನಗರ: ಎಣ್ಣೆ ಪಾರ್ಟಿಗೆ ಕರೆದು ಸ್ನೇಹಿತನ ಭೀಕರ ಹತ್ಯೆ!

ಕೊಳ್ಳೇಗಾಲ: ಪದೇ ಪದೇ ರೇಗಿಸುತ್ತಿದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನೇ ಎಣ್ಣೆ ಪಾರ್ಟಿಗೆ ಕರೆದು ಕಬ್ಬಿಣದ ರಾಡ್ನಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕುಣಗಳ್ಳಿ ಗ್ರಾಮದ ಬಳಿ ನಡೆದಿದೆ.
ಘಟನೆಯ ವಿವರ:
ರಾಮಕೃಷ್ಣ ಮೃತಪಟ್ಟ ವ್ಯಕ್ತಿ. ಈತನ ಸ್ನೇಹಿತ ಮಲ್ಲಿಕಾರ್ಜುನ್ ಎಂಬುವವನೇ ಕೊಲೆ ಮಾಡಿದ ಆರೋಪಿ. ಮಲ್ಲಿಕಾರ್ಜುನ್ ತನ್ನ ಸ್ನೇಹಿತ ರಾಮಕೃಷ್ಣನನ್ನು “ಎಣ್ಣೆ ಪಾರ್ಟಿ ಮಾಡೋಣ ಬಾ” ಎಂದು ನಂಬಿಸಿ ರಾತ್ರಿ ವೇಳೆ ಜಮೀನಿಗೆ ಕರೆದೊಯ್ದಿದ್ದಾನೆ. ಅಲ್ಲಿ ಇಬ್ಬರೂ ಸೇರಿ ಮದ್ಯ ಸೇವಿಸಿದ ಬಳಿಕ, ಮಲ್ಲಿಕಾರ್ಜುನ್ ತನ್ನ ಬಳಿಯಿದ್ದ ಕಬ್ಬಿಣದ ರಾಡ್ನಿಂದ ರಾಮಕೃಷ್ಣನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ, ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ರಾಮಕೃಷ್ಣ ಅವರು ಸ್ಥಳದಲ್ಲೇ ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ಸಮಯದಿಂದ ರಾಮಕೃಷ್ಣ ತನ್ನನ್ನು ಪದೇ ಪದೇ ರೇಗಿಸುತ್ತಿದ್ದ ಎಂಬ ಕೋಪದಿಂದ ಮಲ್ಲಿಕಾರ್ಜುನ್ ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸರ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಮಾಂಬಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಆರೋಪಿ ಮಲ್ಲಿಕಾರ್ಜುನನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.



