ನನಗೆ ಹಾಡು ಗೊತ್ತು, ಹಗರಣಗಳಲ್ಲ”: ಮೈಕ್ರೋ ಫೈನಾನ್ಸ್ ವಿವಾದಕ್ಕೆ ಗಾಯಕಿ ಮಂಗ್ಲಿ ಖಡಕ್ ಪ್ರತಿಕ್ರಿಯೆ

ಹೈದರಾಬಾದ್: ತೆಲಂಗಾಣದಲ್ಲಿ ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿರುವ ಕೋಟ್ಯಂತರ ರೂಪಾಯಿ ಮೊತ್ತದ ಮೈಕ್ರೋ ಫೈನಾನ್ಸ್ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಮಂಗ್ಲಿ ಅವರು ಇಂದು ಡಿಜಿಪಿ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. “ನಾನು ತಪ್ಪು ಮಾಡಿದ್ದರೆ ಎಂತಹ ಶಿಕ್ಷೆಗಾದರೂ ಸಿದ್ಧ” ಎಂದು ಅವರು ಈ ಸಂದರ್ಭದಲ್ಲಿ ಸವಾಲು ಹಾಕಿದ್ದಾರೆ.
ಸಿಮೆಂಟ್ ಕಂಪನಿಯಲ್ಲಿ ಹೂಡಿಕೆ ಮಾಡುವ ಆಮಿಷವೊಡ್ಡಿ ಮಧು ಅಂಡ್ ಗ್ಯಾಂಗ್ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ರಾಮಾವತ್ ಮಧು, ಬಾಲಾಜಿ ನಾಯಕ್ ಮತ್ತು ಭರತ್ ಚೌಹಾಣ್ ವಿರುದ್ಧ ನಲ್ಗೊಂಡ ಮತ್ತು ಗದ್ವಾಲ್ನಲ್ಲಿ ಈಗಾಗಲೇ 62 ಪ್ರಕರಣಗಳು ದಾಖಲಾಗಿವೆ. ಸದ್ಯ ಈ ಬೃಹತ್ ಹಗರಣದ ತನಿಖೆಯನ್ನು ಸಿಐಡಿ (CID) ನಡೆಸುತ್ತಿದ್ದು, ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಇತ್ತೀಚೆಗೆ ಪ್ರಮುಖ ಆರೋಪಿ ರಾಮಾವತ್ ಮಧು ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಹಿಮಕಾಂತ್ ರೆಡ್ಡಿ ಎಂಬುವವರು ತನ್ನನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದನು. ಇದೇ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಅವರ ಹೆಸರನ್ನು ಪ್ರಕರಣದೊಳಗೆ ಎಳೆದು ತರಲಾಗಿದೆ. ಆದರೆ ಮಂಗ್ಲಿ ಪರ ವಕೀಲರು ಈ ಆರೋಪವನ್ನು ತಳ್ಳಿಹಾಕಿದ್ದು, “ತನ್ನ ಮೇಲಿರುವ ತನಿಖೆಯನ್ನು ದಾರಿ ತಪ್ಪಿಸಲು ಹಿಮಕಾಂತ್ ರೆಡ್ಡಿ ಅವರು ಉದ್ದೇಶಪೂರ್ವಕವಾಗಿ ಮಂಗ್ಲಿ ಹೆಸರನ್ನು ಬಳಸುತ್ತಿದ್ದಾರೆ” ಎಂದು ದೂರಿದ್ದಾರೆ.
ತನ್ನ ಮೇಲೆ ಕೇಳಿಬರುತ್ತಿರುವ ನಿರಂತರ ಆರೋಪಗಳಿಂದ ಮನನೊಂದ ಮಂಗ್ಲಿ, ಇಂದು ಹೈದರಾಬಾದ್ನ ಡಿಜಿಪಿ ಕಚೇರಿಗೆ ತೆರಳಿದ್ದರು. ಡಿಜಿಪಿ ಲಭ್ಯವಿಲ್ಲದ ಕಾರಣ ಅಡಿಷನಲ್ ಡಿಜಿ ಮಹೇಶ್ ಭಗವತ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಅಲ್ಲದೆ ರಾಮಾವತ್ ಮಧು, ಹಿಮಕಾಂತ್ ರೆಡ್ಡಿ, ಸಿದ್ದು ಮತ್ತು ಸುಬ್ಬಾರಾವ್ ಎಂಬುವವರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.
ನಾನು ಅತ್ಯಂತ ಬಡತನದಿಂದ ಬಂದವಳು, ಕಷ್ಟದ ಬೆಲೆ ನನಗೆ ಗೊತ್ತು. ಕಳೆದ ಒಂದು ತಿಂಗಳಿನಿಂದ ನನ್ನ ಮೇಲೆ ಬರುತ್ತಿರುವ ಸುಳ್ಳು ಆರೋಪಗಳಿಂದ ತೀವ್ರ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನೆಲ್ಲಾ ರೆಕಾರ್ಡಿಂಗ್ ಹಾಗೂ ಕಾರ್ಯಕ್ರಮಗಳನ್ನು ಬದಿಗಿಟ್ಟು ತನಿಖೆಗೆ ಸಹಕರಿಸುತ್ತಿದ್ದೇನೆ. ನನಗೆ ಹಾಡುಗಳು ಮಾತ್ರ ಗೊತ್ತು, ಇಂತಹ ಹಗರಣಗಳಲ್ಲ. ಒಂದು ವೇಳೆ ನಾನು ಈ ವಂಚನೆಯಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಎಂತಹ ಶಿಕ್ಷೆಗಾದರೂ ಸಿದ್ಧಳಿದ್ದೇನೆ. ನಾನು ಯಾವಾಗಲೂ ಸಂತ್ರಸ್ತರ ಪರವಾಗಿರುತ್ತೇನೆ,” ಎಂದು ಅವರು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣವು ಈಗ ಸಿನಿಮಾ ಹಾಗೂ ಸಾಂಸ್ಕೃತಿಕ ವಲಯದಲ್ಲೂ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.



