ನಿಯಮಬಾಹಿರ ಸೈಲೆನ್ಸರ್ಗಳ ವಿರುದ್ಧ ಚಿಕ್ಕಬಳ್ಳಾಪುರ ಸಂಚಾರ ಪೊಲೀಸರ ಭರ್ಜರಿ ಕಾರ್ಯಾಚರಣೆ: ದಂಡದ ಜೊತೆ ಸವಾರರಿಗೆ ಕಾನೂನು ಅರಿವು

ಚಿಕ್ಕಬಳ್ಳಾಪುರ: ಸಾರ್ವಜನಿಕರಿಗೆ ಹಾಗೂ ಪಾದಚಾರಿಗಳಿಗೆ ತೀವ್ರ ಶಬ್ದ ಮಾಲಿನ್ಯದಿಂದ ಉಂಟಾಗುತ್ತಿದ್ದ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪೊಲೀಸರು ನಗರದಾದ್ಯಂತ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ನಿಯಮಬಾಹಿರವಾಗಿ ಹಾಗೂ ದೋಷಪೂರಿತವಾಗಿ ಮಾರ್ಪಡಿಸಿದ ಸೈಲೆನ್ಸರ್ಗಳನ್ನು ಅಳವಡಿಸಿಕೊಂಡಿದ್ದ ದ್ವಿಚಕ್ರ ವಾಹನಗಳನ್ನು ಪತ್ತೆಹಚ್ಚಿ, ಸ್ಥಳದಲ್ಲೇ ಅವುಗಳನ್ನು ತೆರವುಗೊಳಿಸಲಾಗಿದೆ.
ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚಾರ ಪೊಲೀಸರು ನಡೆಸಿದ ಈ ವಿಶೇಷ ತಪಾಸಣೆಯ ವೇಳೆ, ಅತಿಯಾದ ಶಬ್ದ ಹೊರಹೊಮ್ಮಿಸುವ ಸೈಲೆನ್ಸರ್ಗಳನ್ನು ಹೊಂದಿದ್ದ ವಾಹನಗಳನ್ನು ವಶಕ್ಕೆ ಪಡೆಯಲಾಯಿತು. ನಿಯಮ ಉಲ್ಲಂಘಿಸಿದ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ (Motor Vehicle Act) ಪ್ರಕರಣಗಳನ್ನು ದಾಖಲಿಸಿ, ಸ್ಥಳದಲ್ಲೇ ದಂಡ ವಿಧಿಸಲಾಯಿತು.
ಕೇವಲ ದಂಡ ವಿಧಿಸುವುದಕ್ಕೆ ಸೀಮಿತವಾಗದ ಪೊಲೀಸರು, ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ಗಳ ಬಳಕೆಯಿಂದ ವೃದ್ಧರಿಗೆ, ರೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಗುವ ಮಾನಸಿಕ ಕಿರಿಕಿರಿ, ಪರಿಸರದ ಮೇಲಾಗುವ ದುಷ್ಪರಿಣಾಮ ಹಾಗೂ ಕಾನೂನು ರೀತ್ಯಾ ಎದುರಿಸಬೇಕಾಗುವ ಕಠಿಣ ಕ್ರಮಗಳ ಕುರಿತು ವಾಹನ ಸವಾರರಿಗೆ ಸ್ಥಳದಲ್ಲೇ ಕೌನ್ಸಿಲಿಂಗ್ ನಡೆಸಿ ಅರಿವು ಮೂಡಿಸಿದರು.
ವಾಹನ ಸವಾರರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನಗಳಲ್ಲಿ ಯಾವುದೇ ರೀತಿಯ ಅನಧಿಕೃತ ಮಾರ್ಪಾಡುಗಳನ್ನು (Alteration) ಮಾಡಬಾರದು ಮತ್ತು ಸರ್ಕಾರದ ಮಾನದಂಡಗಳಿಗೆ ಅನುಗುಣವಾದ ಸೈಲೆನ್ಸರ್ಗಳನ್ನು ಮಾತ್ರ ಬಳಸಬೇಕು ಎಂದು ಚಿಕ್ಕಬಳ್ಳಾಪುರ ಸಂಚಾರ ಠಾಣೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ವಿಶೇಷ ಕಾರ್ಯಾಚರಣೆಗಳು ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿವೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



