ಚಿಕ್ಕೋಡಿ: ಅಡುಗೆ ಅನಿಲ ಕೃತಕ ಅಭಾವ ಸೃಷ್ಟಿಸಿದರೆ ಕಠಿಣ ಕ್ರಮ – ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಎಚ್ಚರಿಕೆ

ಚಿಕ್ಕೋಡಿ: ತಾಲ್ಲೂಕಿನಲ್ಲಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯ ಹಾಗೂ ಸಾರ್ವಜನಿಕರಲ್ಲಿ ಹಬ್ಬಿರುವ ಆತಂಕವನ್ನು ದೂರಮಾಡುವ ನಿಟ್ಟಿನಲ್ಲಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾಂವಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು.
ನಗರದ ತಹಶೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ನಡೆದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ಯಾಸ್ ಏಜೆನ್ಸಿ ಮಾಲೀಕರ ಸಭೆಯಲ್ಲಿ, ಅನಿಲ ಪೂರೈಕೆ ಸುಗಮಗೊಳಿಸುವ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಯಿತು.
ಯಾವುದೇ ಗ್ಯಾಸ್ ಕಂಪನಿ ಅಥವಾ ಏಜೆನ್ಸಿಗಳು ಅನಧಿಕೃತವಾಗಿ ಸಿಲಿಂಡರ್ಗಳನ್ನು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸಬಾರದು. ಸಾರ್ವಜನಿಕರಲ್ಲಿ ಗ್ಯಾಸ್ ಕೊರತೆಯ ಬಗ್ಗೆ ಅನಗತ್ಯ ಭಯ ಮೂಡದಂತೆ ಎಚ್ಚರಿಕೆ ವಹಿಸಬೇಕು.
ಮನೆ ಬಳಕೆಯ (Domestic) ಸಿಲಿಂಡರ್ಗಳನ್ನು ಹೋಟೆಲ್ಗಳಿಗೆ ಪೂರೈಸಬಾರದು. ಹೊರಗಡೆ ದಲ್ಲಾಳಿಗಳು ಅನಧಿಕೃತವಾಗಿ ಸಿಲಿಂಡರ್ ಶೇಖರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳಾಗಿದ್ದು, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಗ್ರಾಮೀಣ ಭಾಗದ ಗ್ರಾಹಕರಿಗೆ 45 ದಿನಗಳಿಗೊಮ್ಮೆ ಹಾಗೂ ನಗರ ಪ್ರದೇಶದವರಿಗೆ 25 ದಿನಗಳ ನಂತರ ಸಿಲಿಂಡರ್ ಬುಕ್ ಮಾಡಲು ಅವಕಾಶವಿದೆ.
ಶಾಲೆಗಳು, ಆಸ್ಪತ್ರೆಗಳು ಹಾಗೂ ಇಂದಿರಾ ಕ್ಯಾಂಟೀನ್ಗಳಿಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸಿದರು.
ಯುದ್ಧದ ಕಾರಣದಿಂದಾಗಿ ಸಿಲಿಂಡರ್ ಅಭಾವ ಉಂಟಾಗಲಿದೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ನಂಬಿ ಜನರು ಒಮ್ಮೆಲೇ ಸಿಲಿಂಡರ್ಗಳಿಗಾಗಿ ಮುಗಿಬೀಳುತ್ತಿರುವುದರಿಂದ ನಿಯಂತ್ರಣ ತಪ್ಪುತ್ತಿದೆ. ಚಿಕ್ಕೋಡಿ ಪಟ್ಟಣದ ಕಿರಣ ಗ್ಯಾಸ್ ಸೇರಿದಂತೆ ಇತರೆ ಏಜೆನ್ಸಿಗಳಿಂದ ಪೂರೈಕೆ ಕ್ರಮಬದ್ಧವಾಗಿ ನಡೆಯುತ್ತಿದೆ. ಸಾರ್ವಜನಿಕರು ಯಾವುದೇ ಭಯ ಪಡುವ ಅಗತ್ಯವಿಲ್ಲ” ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.



