ಆಂಟಿ ಸಂಘ.. ಅಭಿಮಾನ ಭಂಗ: 6 ತಿಂಗಳಾದರೂ ಜ್ಯೋತಿಷಿ ಕಮಲಾಕರ ಭಟ್ಗೆ ಸಿಗಲಿಲ್ಲ ಬಿಡುಗಡೆ ಭಾಗ್ಯ, ಜಾಮೀನು ಅರ್ಜಿ ವಜಾ!

ಸಿದ್ದಾಪುರ/ಶಿರಸಿ: ಟಿವಿ ಪರದೆಗಳ ಮುಂದೆ ಕುಳಿತು ಬೇರೆಯವರ ಭವಿಷ್ಯ ಹೇಳುತ್ತಿದ್ದ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ಗೆ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿ 6 ತಿಂಗಳು ಕಳೆದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸತ್ರ ನ್ಯಾಯಾಲಯ ಖಡಾಖಂಡಿತವಾಗಿ ವಜಾಗೊಳಿಸಿದೆ.
ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದ ‘ಅಡಿಕೆ ಭಟ್ರು’ ಎಂದೇ ಗುರುತಿಸಿಕೊಂಡಿದ್ದ ಕಮಲಾಕರ ಭಟ್, ಅಕ್ರಮ ಸಂಬಂಧದ ವ್ಯಾಮೋಹಕ್ಕೆ ಬಿದ್ದು ಕೊಲೆ ಪ್ರಕರಣದಲ್ಲಿ ಲಾಕ್ ಆಗಿ ಈಗ ಜೈಲು ಕಂಬಿ ಎಣಿಸುವಂತಾಗಿದೆ.
ಫೆಬ್ರವರಿ 3ರಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ನಡೆದಿದ್ದ ವಸಂತ್ ನಾಯ್ಕ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಕರ ಭಟ್ ಹಾಗೂ ಆತನ ಪ್ರೇಯಸಿ ಜೈಲು ಪಾಲಾಗಿದ್ದರು. ಕೊಲೆಯಾಗಿ ಆರು ತಿಂಗಳ ಬಳಿಕ “ನಮಗೆ ಜಾಮೀನು ಕೊಡಿ” ಎಂದು ಕೋರ್ಟ್ ಮೆಟ್ಟಿಲೇರಿದ್ದ ಆರೋಪಿಗಳಿಗೆ ಶಿರಸಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬಿಗ್ ಶಾಕ್ ನೀಡಿದ್ದು, ಜಾಮೀನು ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ.
ಈ ಕೊಲೆ ಪ್ರಕರಣದ ನಿಜವಾದ ಸೂತ್ರಧಾರಿ ಕೊಲೆಯಾದ ವಸಂತ್ ನಾಯ್ಕ್ ಹೆಂಡತಿ ಸುಚಿತ್ರಾ ನಾಯ್ಕ್. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಲಾಗಿದ್ದ ಗಂಡನನ್ನು ತಂಗಾಳಿಯಂತೆ ಮುಗಿಸಲು ಈಕೆ ಸ್ಕೆಚ್ ಹಾಕಿದ್ದಳು. ಈಕೆಯ ಮೋಹದ ಬಲೆಗೆ ಬಿದ್ದು ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ ಕಮಲಾಕರ ಭಟ್ರಿಗೆ ಈಗ ಕೋರ್ಟ್ನಲ್ಲಿ ಬೇಲ್ ಸಿಗದೆ ಜೈಲೇ ಗತಿಯಾಗಿದೆ.
ಕೋರ್ಟ್ನಲ್ಲಿ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆಯೇ, “ಅಯ್ಯೋ ಈ ಸುಚಿತ್ರಾಳನ್ನು ನಂಬಿ ನನ್ನ ಬಂಗಾರದಂತಿದ್ದ ಬದುಕನ್ನು ಹಾಳು ಮಾಡಿಕೊಂಡೆನಲ್ಲಾ” ಎಂದು ಕಮಲಾಕರ ಭಟ್ ಪಶ್ಚಾತ್ತಾಪದಿಂದ ಕಣ್ಣೀರಿಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಜನರ ಜಾತಕ ನೋಡಿ ಭವಿಷ್ಯ ಹೇಳುತ್ತಿದ್ದ ಜ್ಯೋತಿಷಿಗೆ, ತನ್ನ ಜಾತಕದಲ್ಲೇ ಜೈಲು ಶಿಕ್ಷೆಯ ಯೋಗವಿದೆ ಎಂಬುದು ತಿಳಿಯದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿಪರ್ಯಾಸಕ್ಕೆ ಹಾಗೂ ಚರ್ಚೆಗೆ ಗ್ರಾಸವಾಗಿದೆ.



