“ಧಮ್ ಇದ್ರೆ ಬಾ” ಎಂದು ಸವಾಲೆಸೆದು ಉದ್ಯಮಿಯ ಭೀಕರ ಶೂಟೌಟ್: ಕುಂದಾಪುರದಲ್ಲಿ ಕಾರಿನಿಂದ ಇಳಿಯುತ್ತಿದ್ದಂತೆ ಗುಂಡಿಕ್ಕಿ ಕೊಲೆ!

ಕುಂದಾಪುರ (ಉಡುಪಿ): ಮೀನಿನ ವ್ಯವಹಾರದ ಹಣಕಾಸಿನ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಜಗಳವೊಂದು ಕಡೆಗೆ ಭೀಕರ ಶೂಟೌಟ್ನಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಕುಂದಾಪುರದಲ್ಲಿ ನಡೆದಿದೆ. ‘ಧಮ್ ಇದ್ರೆ ಬಾ’ ಎಂದು ಸವಾಲೆಸೆದು ಕರೆಸಿಕೊಂಡ ದುಷ್ಕರ್ಮಿಯೊಬ್ಬ ಉದ್ಯಮಿಯನ್ನು ಸಾರ್ವಜನಿಕ ರಸ್ತೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಉಡುಪಿಯ ಬಾರ್ಕೂರು ಮೂಲದ ಉದ್ಯಮಿ ಐವನ್ ಮಸ್ಕರೇನಸ್ ಕೊಲೆಯಾದ ದುರ್ದೈವಿ.
ಮೀನಿನ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಐವನ್ ಅವರಿಗೆ ವ್ಯಕ್ತಿಯೊಬ್ಬರಿಂದ ಹಣ ಬರಬೇಕಿತ್ತು. ಈ ಹಣದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಬಂದಿದ್ದ ಡೆರಿಕ್ ಎಂಬಾತ ಗುರುವಾರ ಮಧ್ಯರಾತ್ರಿ 11:30ರ ಸುಮಾರಿಗೆ ಫೋನ್ ಮಾಡಿ ಗಲಾಟೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, “ದಮ್ ಇದ್ರೆ ನಾನಿದ್ದಲ್ಲಿಗೆ ಬಾ” ಎಂದು ಕುಂದಾಪುರದ ಲೊಕೇಶನ್ ಕಳುಹಿಸಿ ಓಪನ್ ಚಾಲೆಂಜ್ ಹಾಕಿದ್ದ.
ಡೆರಿಕ್ ಹಾಕಿದ ಸವಾಲನ್ನು ಸ್ವೀಕರಿಸಿದ ಐವನ್, ಬೆಳಗಿನ ಜಾವ 3:30ರ ಸುಮಾರಿಗೆ ತಮ್ಮ ಎರಡನೇ ಪತ್ನಿಯೊಂದಿಗೆ ಕಾರಿನಲ್ಲಿ ಕುಂದಾಪುರಕ್ಕೆ ತೆರಳಿದ್ದಾರೆ. ಅಲ್ಲಿನ ‘ಹೋಲಿ ರೋಜಾರಿಯೋ ಚರ್ಚ್’ ಸಮೀಪದ ರಸ್ತೆಯಲ್ಲಿ ತನ್ನ ಕಾರಿನಲ್ಲಿ ಕಾಯುತ್ತಿದ್ದ ಡೆರಿಕ್, ಐವನ್ ಕಾರಿನಿಂದ ಇಳಿಯುತ್ತಿದ್ದಂತೆ ಗನ್ನಿಂದ ಸೊಂಟದ ಕೆಳಭಾಗಕ್ಕೆ ಶೂಟ್ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಐವನ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಈ ಭೀಕರ ದೃಶ್ಯಕ್ಕೆ ಅವರ ಪತ್ನಿಯೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಪ್ರಾಣ ಕಳೆದುಕೊಂಡ ಐವನ್ ಮಸ್ಕರೇನಸ್ 2014ರಲ್ಲಿ ನಡೆದಿದ್ದ ಉಡುಪಿಯ ಕುಖ್ಯಾತ ರೌಡಿಶೀಟರ್ ‘ಪಿಟ್ಟಿ ನಾಗೇಶ’ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಆ ನಂತರ ರೌಡಿಸಂನಿಂದ ದೂರವಿದ್ದು, ಲ್ಯಾಂಡ್ ಲಿಂಕ್ಸ್ ಹಾಗೂ ಮೀನಿನ ವ್ಯಾಪಾರ ಮಾಡಿಕೊಂಡಿದ್ದ. ಆದರೆ ಈ ಕೊಲೆ ರೌಡಿಸಂ ಕಾರಣಕ್ಕಲ್ಲ, ಹಣದ ವ್ಯವಹಾರದ ವೈಷಮ್ಯದಿಂದ ನಡೆದಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಡೆರಿಕ್ ಬಂಧನಕ್ಕಾಗಿ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದು, ಜಾಲ ಬೀಸಿದ್ದಾರೆ.
ಹಣದ ವಿಚಾರಕ್ಕೆ ನಡೆದ ಈ ಭೀಕರ ಕೊಲೆ ಘಟನೆ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದೆ.



