ಮುತ್ತೋಡಿ ಅರಣ್ಯದಲ್ಲಿ 50 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು: ಸ್ಥಳದಲ್ಲಿ ಯಾರೂ ಇಲ್ಲ, ಬೇಟೆಯ ಶಂಕೆ?

ಚಿಕ್ಕಮಗಳೂರು: ಕಾಫಿ ನಾಡಿನ ಮುತ್ತೋಡಿ ಅರಣ್ಯ ವಲಯದ ಹೊನ್ನಾಳ ಗ್ರಾಮದ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸುಮಾರು 50 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಆದರೆ, ಅಪಘಾತದ ಬಳಿಕ ಕಾರಿನಲ್ಲಿದ್ದವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಮುತ್ತೋಡಿ ಅರಣ್ಯ ವ್ಯಾಪ್ತಿಯ ಹೊನ್ನಾಳ ಗ್ರಾಮದ ಬಳಿ ಸಾಗುತ್ತಿದ್ದ ಕಾರು ಏಕಾಏಕಿ ಚಾಲಕನ ಹತೋಟಿ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. 50 ಅಡಿ ಎತ್ತರದಿಂದ ಬಿದ್ದ ರಭಸಕ್ಕೆ ಕಾರು ನಾಲ್ಕು ಚಕ್ರಗಳು ಮೇಲಾಗಿ ಪಲ್ಟಿಯಾಗಿದೆ. ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಕಾರಿನ ಬಳಿ ಯಾರೂ ಇರಲಿಲ್ಲ. ಕಾರಿನಲ್ಲಿದ್ದವರು ಯಾರು? ಅವರಿಗೆ ಏನಾಯಿತು? ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಅಪಘಾತ ಸಂಭವಿಸಿ ಇಷ್ಟು ಸಮಯ ಕಳೆದರೂ ಮಲ್ಲಂದೂರು ಪೊಲೀಸ್ ಠಾಣೆಗೆ ಕಾರಿನ ಮಾಲೀಕರಾಗಲಿ ಅಥವಾ ಅದರಲ್ಲಿ ಪ್ರಯಾಣಿಸುತ್ತಿದ್ದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ. ಇಷ್ಟು ದೊಡ್ಡ ಅಪಘಾತ ಸಂಭವಿಸಿದರೂ ಪೊಲೀಸರಿಗೆ ದೂರು ನೀಡದಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಘಟನೆ ನಡೆದಿರುವುದು ಅರಣ್ಯ ವಲಯದ ವ್ಯಾಪ್ತಿಯಲ್ಲಿರುವುದರಿಂದ, ಈ ಕಾರಿನಲ್ಲಿ ಬಂದವರು ವನ್ಯಪ್ರಾಣಿಗಳ ಬೇಟೆಗೆ ಬಂದಿದ್ದರಾ? ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ಪೊಲೀಸರಿಗೆ ಮಾಹಿತಿ ನೀಡಿದರೆ ಸಿಕ್ಕಿಬೀಳುವ ಭೀತಿಯಿಂದ ಗಾಯಾಳುಗಳು ಅಥವಾ ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.
ಸದ್ಯ ಈ ಕುರಿತು ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಪೊಲೀಸರು ಕಾರಿನ ನಂಬರ್ ಆಧರಿಸಿ ತನಿಖೆ ಕೈಗೊಳ್ಳುವ ನಿರೀಕ್ಷೆಯಿದೆ.



