ವಿಚ್ಛೇದನ ಪ್ರಕರಣ ಕಡಿಮೆ ಮಾಡಲು ‘ತೆರೆ ಮೇರೆ ಸಪ್ನೆ – ಕೂಡಿ ಬಾಳೋಣ’ ಯೋಜನೆ: ಡಾ. ನಾಗಲಕ್ಷ್ಮಿ ಚೌಧರಿ

ಬೆಂಗಳೂರು : ಮದುವೆಯು ಕೇವಲ ಆಡಂಬರಕ್ಕೆ ಸೀಮಿತವಾಗದೆ, ಶಾಶ್ವತವಾಗಿ ಉತ್ತಮ ಕೌಟುಂಬಿಕ ಜೀವನ ಕಟ್ಟಿಕೊಳ್ಳಲು ಬುನಾದಿಯಾಗಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಕಲಹ ಹಾಗೂ ವಿಚ್ಛೇದನ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಮಹಿಳಾ ಆಯೋಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ಆಯೋಗದ ಸಹಯೋಗದಲ್ಲಿ “ತೆರೆ ಮೇರೆ ಸಪ್ನೆ – ಕೂಡಿ ಬಾಳೋಣ” ಕಾರ್ಯಕ್ರಮವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಈ ಯೋಜನೆಯಡಿ ರಾಜ್ಯದ 175 ಸಾಂತ್ವನ ಕೇಂದ್ರಗಳಲ್ಲಿ ‘ವಿವಾಹಪೂರ್ವ ಸಂವಹನ ಕೇಂದ್ರ’ಗಳನ್ನು ಸ್ಥಾಪಿಸಲಾಗುತ್ತಿದೆ.
ವಿವಾಹಪೂರ್ವ ಸಮಾಲೋಚನೆಯ ಪ್ರಮುಖ ಅಂಶಗಳು:
ವಿವಾಹಕ್ಕೂ ಮುನ್ನ ಯುವಜನರು ಹಾಗೂ ಭಾವಿ ದಂಪತಿಗಳಿಗೆ ಕೌಟುಂಬಿಕ ಜೀವನಕ್ಕೆ ಅಗತ್ಯವಿರುವ ವಿವಿಧ ವಿಷಯಗಳ ಕುರಿತು ಅರಿವು ಮೂಡಿಸಲಾಗುತ್ತದೆ:
ಪರಸ್ಪರ ಅರಿವು ಮತ್ತು ಪರಿಣಾಮಕಾರಿ ಸಂವಹನ
ಭಿನ್ನಾಭಿಪ್ರಾಯಗಳ ಸರಳ ಪರಿಹಾರ ಹಾಗೂ ಭಾವನಾತ್ಮಕ ಸಿದ್ಧತೆ
ಕುಟುಂಬದ ಆರ್ಥಿಕ ನಿರ್ವಹಣೆ
ಲಿಂಗ ಸಮಾನತೆ ಮತ್ತು ಪರಸ್ಪರ ಗೌರವ
ಸಮಾಲೋಚಕರಿಗೆ ವಿಶೇಷ ತರಬೇತಿ ಹಾಗೂ ಸಹಾಯವಾಣಿ:
ರಾಜ್ಯದ 175 ಸಾಂತ್ವನ ಕೇಂದ್ರಗಳ ಸಮಾಲೋಚಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಕೇಂದ್ರದಿಂದ ಐವರು ಸಮಾಲೋಚಕರನ್ನು ಸಜ್ಜುಗೊಳಿಸಲಾಗುತ್ತಿದೆ. ತರಬೇತಿ ಪೂರ್ಣಗೊಂಡ ಬಳಿಕ ಸಾರ್ವಜನಿಕರಿಗೆ ಈ ಸೇವೆ ಲಭ್ಯವಾಗಲಿದೆ.
ಈ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ತಲುಪಿಸಲು ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಲಾಗುವುದು. ಜೊತೆಗೆ, ತಕ್ಷಣದ ಮಾರ್ಗದರ್ಶನಕ್ಕಾಗಿ ಶೀಘ್ರದಲ್ಲೇ ಪ್ರತ್ಯೇಕ ಸಹಾಯವಾಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಡಾ. ನಾಗಲಕ್ಷ್ಮಿ ಚೌಧರಿ ಸ್ಪಷ್ಟಪಡಿಸಿದರು.



