ಪ್ರಸಿದ್ಧ ಯೂಟ್ಯೂಬರ್ ಅಖಿಲ್ ಎನ್ಆರ್ಡಿ ಪತ್ನಿ ಪ್ರಿಯಕರನೊಂದಿಗೆ ಪರಾರಿ: ಬಿಗ್ ಬಾಸ್ ಮಾಜಿ ಸ್ಪರ್ಧಿ ಸಾಯಿ ಕೃಷ್ಣ ಹೇಳಿದ್ದೇನು?

ಕೇರಳ: ಲಕ್ಷಾಂತರ ಫಾಲೋವರ್ಸ್ಗಳನ್ನು ಹೊಂದಿರುವ ಖ್ಯಾತ ಮಲಯಾಳಂ ಯೂಟ್ಯೂಬರ್ ಹಾಗೂ ಕಂಟೆಂಟ್ ಕ್ರಿಯೇಟರ್ ನಟ ಅಖಿಲ್ ಎನ್ಆರ್ಡಿ ಅವರ ಪತ್ನಿ ಮೇಘ, ರಾತ್ರೋರಾತ್ರಿ ಪ್ರಿಯಕರನೊಂದಿಗೆ (ಬಸ್ ಕಂಡಕ್ಟರ್) ಮನೆ ತೊರೆದು ಪರಾರಿಯಾಗಿರುವ ಘಟನೆ ಕೇರಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಧರಿಸಿದ್ದ ನೈಟಿಯಲ್ಲೇ ಲಗೇಜ್ ಬ್ಯಾಗ್ ಹಿಡಿದು ಆಕೆ ತೆರಳುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲೂ ಸೆರೆಯಾಗಿವೆ ಎನ್ನಲಾಗಿದೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಸಾಯಿ ಕೃಷ್ಣ ಆಘಾತ:
ಅಖಿಲ್ ಅವರ ಆಪ್ತ ಸ್ನೇಹಿತ ಹಾಗೂ ಮಾಜಿ ಬಿಗ್ ಬಾಸ್ ತಾರೆ ಸಾಯಿ ಕೃಷ್ಣ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದು, ತಮಗೆ ತೀವ್ರ ಆಘಾತವಾಗಿದೆ ಎಂದು ತಿಳಿಸಿದ್ದಾರೆ.
“2021ರಿಂದಲೂ ನನಗೆ ಅಖಿಲ್ ಜೊತೆ ಉತ್ತಮ ಸ್ನೇಹವಿದೆ. ಅವರ ಮದುವೆಗೆ ಹೋದವರಲ್ಲಿ ನಾನೂ ಒಬ್ಬ. ಸೋಶಿಯಲ್ ಮೀಡಿಯಾದಲ್ಲಿ ಅನಾಮಧೇಯ ಪೋಸ್ಟ್ ಒಂದನ್ನು ನೋಡಿ ಬಳಿಕ ವಿಚಾರಿಸಿದಾಗ ಈ ಸುದ್ದಿ ನಿಜವೆಂದು ತಿಳಿಯಿತು. ಇನ್ನೊಬ್ಬರ ನೋವನ್ನು ನೋಡಿ ಯಾರೂ ನಗಬೇಡಿ, ಇಂತಹ ಘಟನೆಗಳು ಯಾರ ಜೀವನದಲ್ಲೂ ನಡೆಯಬಹುದು” ಎಂದು ಸಾಯಿ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರನ್ನೂ ದೂಷಿಸಬೇಡಿ ಎಂದ ಅಖಿಲ್ ಎನ್ಆರ್ಡಿ:
ಈ ಆಘಾತಕಾರಿ ಘಟನೆಯ ಹೊರತಾಗಿಯೂ ಅಖಿಲ್ ಅತ್ಯಂತ ತಾಳ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದುಬಂದಿದೆ. ‘ಮನೋರಮಾ ಆನ್ಲೈನ್’ ವರದಿಯ ಪ್ರಕಾರ, ತಮ್ಮ ಪತ್ನಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ನೆಗೆಟಿವ್ ಕಾಮೆಂಟ್ ಅಥವಾ ನಿಂದನೆಗಳನ್ನು ಮಾಡದಂತೆ ಅಖಿಲ್ ಮನವಿ ಮಾಡಿದ್ದಾರೆ.
”ಜನರು ಏನೇ ಮಾತನಾಡಿಕೊಳ್ಳಲಿ, ಆದರೆ ಆಕೆಗೆ ಏನೂ ಹೇಳಬೇಡಿ. ಆಕೆಗೆ ಯಾವುದು ಸರಿ ಎನಿಸಿತೋ ಅದನ್ನು ಆಕೆ ಮಾಡಿದ್ದಾಳೆ. ಇಷ್ಟು ವರ್ಷ ಪ್ರೀತಿಸಿದ ವ್ಯಕ್ತಿಯನ್ನು ನಾನು ದ್ವೇಷಿಸಿದರೂ, ಸಾರ್ವಜನಿಕವಾಗಿ ಆಕೆಯನ್ನು ಟೀಕಿಸುವುದನ್ನು ನಾನು ಸಹಿಸುವುದಿಲ್ಲ. ಇದೇ ಕೊನೆಯಲ್ಲ, ಜೀವನದಲ್ಲಿ ಮುಂದೆ ಸಾಗಬೇಕಿದೆ (Move on) ಮತ್ತು ನಾನು ಮತ್ತೆ ಬಲವಾಗಿ ಕಂಬ್ಯಾಕ್ ಮಾಡುತ್ತೇನೆ” ಎಂದು ಅಖಿಲ್ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪರ-ವಿರೋಧ ಚರ್ಚೆಗಳು ಹಾಗೂ ಊಹಾಪೋಹಗಳು ಜೋರಾಗಿ ನಡೆಯುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲೂ ಹೇಳಿಕೆಗಳು ದಾಖಲಾಗಿವೆ ಎಂದು ವರದಿಯಾಗಿದೆ.



