ಚಿಂತಾಮಣಿಯಲ್ಲಿ ಬಿ ಎಲ್ ಎ-2 ಕಾರ್ಯಾಗಾರ:ಮತದಾರರ ಪಟ್ಟಿ ಪರಿಷ್ಕರಣೆಗೆ ಆದ್ಯತೆ

2028ರ ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ಬಿಜೆಪಿ ಬಾವುಟ ಹಾರಿಸುವುದು ನಮ್ಮ ಮುಖ್ಯ ಗುರಿ
ಚಿಕ್ಕಬಳ್ಳಾಪುರ :ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ತನ್ನ ಸಾಂಸ್ಥಿಕ ಬಲವರ್ಧನೆಗೆ ಮುಂದಾಗಿದ್ದು,ಜಿಲ್ಲೆಯ ಚಿಂತಾಮಣಿ ನಗರದ ಕೆಎಂಡಿ ಕಲ್ಯಾಣ ಮಂಟಪದಲ್ಲಿ ಬಿಎಲ್ಎ-2 ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಬಿಜೆಪಿ ಮುಖಂಡ ವೇಣುಗೋಪಾಲ್(ಗೋಪಿ)ಎಲ್ಲಾ ಚುನಾವಣೆಗಳಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೆ,ಪಾರದರ್ಶಕವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳುವುದು ಪಕ್ಷದ ಪ್ರಮುಖ ಆದ್ಯತೆಯಾಗಿದೆ,
ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.ವಿಶೇಷವಾಗಿ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವುದು, ವಲಸೆ ಹೋದವರ ವಿಳಾಸ ಬದಲಾವಣೆ ಹಾಗೂ ಹೊಸ ಮತದಾರರ ಸೇರ್ಪಡೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ,ಪ್ರತಿಯೊಬ್ಬರಿಗೂ ಒಂದು ಮತ ಎಂಬ ಸಿದ್ಧಾಂತವನ್ನು ಜಾರಿಗೆ ತರಲು, ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ ಮತದಾರರನ್ನು ಗುರುತಿಸಿ ಪಟ್ಟಿಯನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ.
ಕಾರ್ಯಕರ್ತರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಪಡೆದು,ಸ್ವಚ್ಛ ಮತ್ತು ನಿಖರವಾದ ಮತದಾರರ ಪಟ್ಟಿ ಸಿದ್ಧಪಡಿಸಲು ಪಣ ತೊಟ್ಟಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಬೆಂಗಳೂರು ಗ್ರಾಮಾಂತರ ಸಹ ಸಂಯೋಜಕರಾದ ರಿಕ್ಷಿತ ರವರು ಮಾತನಾಡಿ ಚುನಾವಣೆಗಳಲ್ಲಿ ಅಕ್ರಮಗಳನ್ನು ತಡೆಯಲು ಡಿಡೆಕ್ಟ್,ಡಿಲೀಟ್ ಮತ್ತು ಡಿಪೋರ್ಟ್ ಎಂಬ ಮಂತ್ರದೊಂದಿಗೆ ಕಾರ್ಯನಿರ್ವಹಿಸಲು ಕರೆ ನೀಡಿ ಮಾತನಾಡಿದವರು ವಿರೋಧ ಪಕ್ಷಗಳು ಇವಿಎಂ ಯಂತ್ರಗಳ ಮೇಲೆ ಪದೇ ಪದೇ ಆರೋಪ ಮಾಡುತ್ತಿವೆ.ಆದರೆ ಮತದಾರರ ಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸುವ ಮೂಲಕ ಇಂತಹ ಸುಳ್ಳು ಆರೋಪಗಳಿಗೆ ನಾವು ಸಮರ್ಥವಾಗಿ ಉತ್ತರ ನೀಡುತ್ತಿದ್ದೇವೆ,ಎಂದು ಅವರು ಹೇಳಿದರು.
ಈ ಅಭಿಯಾನದ ಮೂಲಕ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವ ಮತ್ತು ಅನರ್ಹರನ್ನು ಹೊರಹಾಕುವ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಚಿಂತಾಮಣಿಯಲ್ಲಿ ಬಿಜೆಪಿ ಬಾವುಟ ಹಾರಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಸಂಯೋಜಕರಾದ ವಾಸು,ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ರಾಜಣ್ಣ,ನಗರಾಧ್ಯಕ್ಷರಾದ ಗೋವಿಂದರಾಜು,ಮಂಜುನಾಥ್,ಶ್ರೀನಿವಾಸ್,ಮಹೇಶ್ ಬೈ,ಶಿವಾರೆಡ್ಡಿ,ರಾಜಶೇಖರರೆಡ್ಡಿ, ದೇವರಾಜ್,ಪ್ರಸಾದ್,ರವಿಕುಮಾರ್,ಮಣಿಕಂಠ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ:ಕೆ.ಮುತ್ತಕದಹಳ್ಳಿ ವೆಂಕಟಾಚಲಪತಿ ಪೊಲೀಸ್ ವಾರ್ತೆ ಚಿಕ್ಕಬಳ್ಳಾಪುರ



