ಪೊಲೀಸ್ ಕ್ವಾರ್ಟರ್ಸ್ ಮುಂಭಾಗ ಅರ್ಧ ರಸ್ತೆಯಲ್ಲಿ ಮಣ್ಣು — ವಾಹನ ಸವಾರರಿಗೆ ತೀವ್ರ ತೊಂದರೆ, ಅಪಘಾತದ ಆತಂಕ!

ಯಾದಗಿರಿ: ನಗರದ ಪೊಲೀಸ್ ಕ್ವಾರ್ಟರ್ಸ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ಕಳೆದ ಸುಮಾರು 20 ದಿನಗಳಿಂದ ಅರ್ಧ ರಸ್ತೆಯನ್ನೇ ಮಣ್ಣು ಆವರಿಸಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಸಂಚಾರ ಸಂಕಷ್ಟ ಎದುರಿಸುತ್ತಿದ್ದಾರೆ.
ರಸ್ತೆಯ ಅರ್ಧಭಾಗ ಮಣ್ಣಿನಿಂದ ಮುಚ್ಚಿಹೋಗಿರುವುದರಿಂದ ವಾಹನಗಳು ಸಂಚರಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದಾಗಿ ಎದುರು-ಬದುರು ವಾಹನಗಳು ಬಂದಾಗ ನಿತ್ಯವೂ ಕಿರಿಕಿರಿ ಹಾಗೂ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದು ಅಪಘಾತಕ್ಕೀಡಾಗುವ ಭೀತಿ ಎದುರಾಗಿದೆ.
ಅಧಿಕಾರಿಗಳ ಮೌನಕ್ಕೆ ಸಾರ್ವಜನಿಕರ ಆಕ್ರೋಶ:
ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ರಸ್ತೆಯಲ್ಲೇ ಮಣ್ಣು ಹಾಕಿದವರು ಯಾರು? ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅನುಮತಿ ಇದೆಯೇ? 20 ದಿನಗಳಿಂದ ಈ ಸಮಸ್ಯೆ ಕಣ್ಣೆದುರಿದ್ದರೂ ಅಧಿಕಾರಿಗಳು ಏಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ? ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನಾಳೆ ದಿನ ಈ ಮಣ್ಣಿನಿಂದಾಗಿ ದೊಡ್ಡ ಅನಾಹುತ ಸಂಭವಿಸಿ ಯಾರಾದರೂ ಗಾಯಗೊಂಡರೆ ಅಥವಾ ಪ್ರಾಣಹಾನಿಯಾದರೆ ಅದಕ್ಕೆ ಹೊಣೆ ಯಾರು?” ಎಂದು ಸ್ಥಳೀಯ ಸವಾರರು ಪ್ರಶ್ನಿಸುತ್ತಿದ್ದಾರೆ.
ತ್ವರಿತ ತೆರವುಗೊಳಿಸಲು ಸಾರ್ವಜನಿಕರ ಒತ್ತಾಯ:
ಯಾವುದೇ ರೀತಿಯ ಅನಾಹುತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ನಗರಸಭೆ, ಪೊಲೀಸ್ ಹಾಗೂ ಇತರ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ರಸ್ತೆಯಲ್ಲಿರುವ ಮಣ್ಣನ್ನು ಕೂಡಲೇ ತೆರವುಗೊಳಿಸಿ, ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಹಾಗೂ ವಾಹನ ಸವಾರರು ಕಟ್ಟುನಿಟ್ಟಾಗಿ ಒತ್ತಾಯಿಸಿದ್ದಾರೆ.



