ರಿಪ್ಪನ್ಪೇಟೆ ಪೊಲೀಸ್ ಜೀಪ್ಗೆ ಅಪರಿಚಿತ ವಾಹನ ಡಿಕ್ಕಿ; ಸೀಟ್ ಬೆಲ್ಟ್, ಏರ್ ಬ್ಯಾಗ್ನಿಂದ ತಪ್ಪಿದ ಭಾರಿ ಅನಾಹುತ!

ಹೊಸನಗರ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಜೀಪ್ಗೆ ಅಪರಿಚಿತ ವಾಹನವೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ನಿಯಂತ್ರಣ ತಪ್ಪಿದ ಜೀಪ್ ಮರಕ್ಕೆ ಅಪ್ಪಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹಿರೇಜೇನಿ ಬಳಿ ನಡೆದಿದೆ.
ಪಿಎಸ್ಐ ರಾಜುರೆಡ್ಡಿ, ಸಿಬ್ಬಂದಿ ವಿಶ್ವನಾಥ್ ಹಾಗೂ ಚಾಲಕ ಅವಿನಾಶ್ ಅವರು ಬಟ್ಟೆಮಲ್ಲಪ್ಪ ಮತ್ತು ಕೋಡೂರು ಭಾಗದಲ್ಲಿ ರಾತ್ರಿ ಗಸ್ತು ಮುಗಿಸಿ ರಿಪ್ಪನ್ಪೇಟೆಗೆ ಹಿಂದಿರುಗುತ್ತಿದ್ದಾಗ, ಸುಮಾರು 2:30ರ ವೇಳೆಗೆ ಈ ಅಪಘಾತ ಸಂಭವಿಸಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು:
ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ. ಆದರೆ, ವಾಹನದಲ್ಲಿದ್ದ ಸಿಬ್ಬಂದಿ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಹಾಗೂ ಅಪಘಾತದ ತೀವ್ರತೆಗೆ ತಕ್ಷಣವೇ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಒಳಗಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಚಾಲಕ ಪರಾರಿ:
ಪೊಲೀಸ್ ಜೀಪ್ಗೆ ಡಿಕ್ಕಿ ಹೊಡೆದ ವಾಹನದ ಚಾಲಕ, ಅಪಘಾತದ ಬಳಿಕ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಚಾಲಕನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.



