ನಿಲ್ಲದ ಅಕ್ರಮ ಪಡಿತರ ಅಕ್ಕಿದಂಧೆ ! ಕಾರಟಗಿಯಲ್ಲಿ ಪಡಿತರ ಅಕ್ಕಿ ತುಂಬಿದ ಆಟೋ ವಶ

ಕಾರಟಗಿ ; ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ತಾಲೂಕಿನಾದ್ಯಂತ ಎಗ್ಗಿಲ್ಲದೇ ರಾಜಾರೊಷವಾಗಿ ಪಡಿತರ ಅಕ್ಕಿ ಮಾರಾಟ ದಂಧೆ ನಿರಂತರ ನಡೆಯುತ್ತಿದ್ದರೂ ಸಂಬಂಧ ಪಟ್ಟ ಆಹಾರ ಇಲಾಖೆ ಕಣ್ಣಿದ್ದೂ ಕುರುಡು ಆಗಿದೆ, ಬಡವರ ಅನ್ನಕ್ಕೆ ಕನ್ನ ಹಾಕಿ ಖಾದಿ ಬಟ್ಟೆ ತೊಟ್ಟ ಖದೀಮರು ಕೂಲಿ ಆಳುಗಳ ಮೂಲಕ ಮನೆ ಮನೆಗೆ ಹೋಗಿ ಅಕ್ಕಿ ಶೇಖರಣೆ ಮಾಡಿ ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಕೋಟ್ಯಾಂತರ ರೂಪಾಯಿ ಬಿಜಿನೆಸ್ ಮಾಡುತ್ತಿದ್ದಾರೆ. ಅಕ್ರಮ ಪಡಿತರ ಅಕ್ಕಿ ಮಾರಾಟದಲ್ಲಿ ಬಹುತೇಕ ರಾಜಕಾರಣಿಗಳ ಬೆಂಬಲಗರೆ ಕನಕಗಿರಿ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ್ದಾರೆ ಎನ್ನುವ ಸಾರ್ವಜನಿಕರ ಮಾತು ತಳ್ಳಿ ಹಾಕುವಂತಿಲ್ಲ.
ಪೊಲೀಸ್ ಇಲಾಖೆ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಖಾದಿ ಬಟ್ಟೆ ಖಧೀಮರು ಅಕ್ಕಿ ಮಾರಾಟವನ್ನು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ಪಡಿತರ ಅಕ್ಕಿ ಗಾಡಿ ಹಿಡಿದು ಸ್ಟೇಷನ್ ಗೆ ಬಂದರೆ ರಾಜಕಾರಣಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗಾಡಿಗಳನ್ನು ಬಿಡಿಸಿಕೊಂಡು ಹೋಗುವ ಖದೀಮರಿಗೆ ಮುಗುದಾಣ ಹಾಕುವ ಹರಸಾಹಸಕ್ಕೆ ಯಾರು ಕೈ ಹಾಕದೇ ಇರುವುದರಿಂದ ಪಡಿತರ ಅಕ್ಕಿ ಅಕ್ರಮ ದಂಧೆ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದಾರೆ.
ಪುಂಗಿ ಊದುವಾಗ ತಲೆದೂಗುವ ನಾಗರಾಜನ ಆಟದಂತೆ, ಅಕ್ರಮ ಪಡಿತರ ಅಕ್ಕಿ ಖಾದಿ ಬಟ್ಟೆ ಖಾಲಿದಿಮರ ಪುಂಗಿಗೆ ಅಧಿಕಾರಿಗಳು ತಲೆದೂಗುತ್ತಿದ್ದಾರೆಯೇ ? ಎನ್ನುವ ಗುಮಾನಿ ಶುರು ಆಗಿದೆ.
ಕಾರಟಗಿ ಪಟ್ಟಣದ ನವಲಿ ರಸ್ತೆಯ ಸಚಿವ ಶಿವರಾಜ್ ತಂಗಡಗಿಯವರ ಮನೆಯ ಮುಂಭಾಗದಲ್ಲಿ ಶನಿವಾರ ಅಕ್ರಮ ಪಡಿತರ ಅಕ್ಕಿ ವಾಹನ 112 ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದೆ. ಹೋರಾಟಗಾರ ಲೋಕೇಶ್ ಮರ್ಲಾನಹಳ್ಳಿ ಅವರು ಪಡಿತರ ಅಕ್ಕಿ ಸಾಗಾಟದ ಮಾಹಿತಿ ಅರಿತು ಶನಿವಾರ ಸಂಜೆ 6.44 ನಿಮಿಷಕ್ಕೆ 112 ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ 112 ಪೊಲೀಸರು ಸುಮಾರು 15 ಕ್ವಿಂಟಲ್ ಪಡಿತರ ಅಕ್ಕಿ ಮಾರಾಟಕ್ಕೆ ಸಾಗಿಸುತ್ತಿದ್ದ ಆಟೋವನ್ನು ಹಿಡಿದು ಕಾರಟಗಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.




