ಋತುಬಂಧ ಆರೈಕೆಗೆ ಐತಿಹಾಸಿಕ ಹೆಜ್ಜೆ: ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ವಿಶೇಷ ಯೋಜನೆ – ರಾಯಭಾರಿಯಾಗಿ ನಟಿ ರಮ್ಯಾ ಆಯ್ಕೆ

ಬೆಂಗಳೂರು: ಮಹಿಳೆಯರ ಮಧ್ಯವಯಸ್ಸಿನ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಋತುಬಂಧ (Menopause) ಆರೈಕೆಯನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಋತುಬಂಧ ಆರೈಕೆ ಯೋಜನೆಯನ್ನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ.
ಭಾರತೀಯ ಮಹಿಳೆಯರು ಸರಾಸರಿ 46ನೇ ವಯಸ್ಸಿನಲ್ಲಿ ಋತುಬಂಧ ಹಂತವನ್ನು ತಲುಪುತ್ತಾರೆ. ಇದು ಜಾಗತಿಕ ಸರಾಸರಿ ವಯಸ್ಸಾದ 51 ವರ್ಷಕ್ಕಿಂತ ಸುಮಾರು ಐದು ವರ್ಷ ಮುಂಚಿತವಾಗಿದ್ದು, ಈ ಕುರಿತು ವ್ಯಾಪಕ ಜಾಗೃತಿ ಮತ್ತು ಸೂಕ್ತ ಆರೋಗ್ಯ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಋತುಬಂಧ ತಜ್ಞೆ ಡಾ. ಜ್ಯೋತ್ಸ್ನಾ ಮಿರ್ಲೆ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಇಂಡಿಯನ್ ಮೆನೋಪಾಸ್ ಸೊಸೈಟಿ, ಪೌಷ್ಟಿಕಾಂಶ ಹಾಗೂ ಮನೋವೈದ್ಯಕೀಯ ಕ್ಷೇತ್ರದ ತಜ್ಞರು ಭಾಗಿಯಾಗಿದ್ದಾರೆ.
ಯೋಜನೆಯ ಪ್ರಮುಖ ಮುಖ್ಯಾಂಶಗಳು:
ಋತುಬಂಧ ಹಾಗೂ ಪೂರ್ವ ಋತುಬಂಧ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
’ಗೃಹ ಆರೋಗ್ಯ’ ಯೋಜನೆಯಲ್ಲಿ ಋತುಬಂಧ ತಪಾಸಣೆಯನ್ನು ಸೇರ್ಪಡೆಗೊಳಿಸುವುದು.
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ತನ ಹಾಗೂ ಮೂಳೆ ಆರೋಗ್ಯ ತಪಾಸಣೆ ನಡೆಸುವುದು.
ಪೌಷ್ಟಿಕ ಆಹಾರ ಹಾಗೂ ಸೂಕ್ತ ಜೀವನಶೈಲಿ ಮಾರ್ಗದರ್ಶನ ನೀಡುವುದು.
ಆಶಾ ಕಾರ್ಯಕರ್ತೆಯರು, ಎಎನ್ಎಂಗಳು ಹಾಗೂ ವೈದ್ಯಾಧಿಕಾರಿಗಳಿಗೆ ವಿಶೇಷ ತರಬೇತಿ ನೀಡುವುದು.
ಮಧ್ಯವಯಸ್ಕ ಮಹಿಳೆಯರಿಗಾಗಿ ವಿಶೇಷ ಆರೋಗ್ಯ ಕ್ಲಿನಿಕ್ಗಳನ್ನು ಆರಂಭಿಸುವುದು.
ಈ ಯೋಜನೆಯನ್ನು ರಾಷ್ಟ್ರ ಮಟ್ಟಕ್ಕೆ ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ರಾಯಭಾರಿಯಾಗಿ ನಟಿ ರಮ್ಯಾ ಆಯ್ಕೆ:
ಇದೇ ವೇಳೆ, ಋತುಬಂಧ ಜಾಗೃತಿ ಯೋಜನೆಗೆ ಖ್ಯಾತ ನಟಿ ರಮ್ಯಾ ಅವರನ್ನು ಅಧಿಕೃತ ರಾಯಭಾರಿಯಾಗಿ (Brand Ambassador) ಆಯ್ಕೆ ಮಾಡಲಾಗಿದೆ. ಮಹಿಳೆಯರಲ್ಲಿ ಅರಿವು ಮೂಡಿಸುವಲ್ಲಿ ಹಾಗೂ ಯೋಜನೆಯನ್ನು ರಾಜ್ಯದ ನಗರ ಮತ್ತು ಗ್ರಾಮೀಣ ಭಾಗಗಳಿಗೆ ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ರಮ್ಯಾ ಅವರ ಪಾತ್ರ ಮಹತ್ವದ್ದಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಮಹಿಳೆಯರ ಆರೋಗ್ಯ ರಕ್ಷಣೆ, ಅರಿವು ಮತ್ತು ಸಮಗ್ರ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಈ ಕ್ರಮವು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಆರೋಗ್ಯ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



