ಕೋಟಿ ಕೋಟಿ ಆಸ್ತಿಯಿದ್ದರೂ ಪ್ರವಾಹದ ನೀರಿಗಿಳಿದು ಸಂತ್ರಸ್ತರ ಕಣ್ಣೀರು ಒರೆಸಿದ ‘ಬಿರ್ಲಾ’ ವಾರಸುದಾರೆ!

ಪ್ರಸಿದ್ಧ ಉದ್ಯಮಿ ಕುಮಾರ್ ಮಂಗಲಂ ಬಿರ್ಲಾ ಅವರ ಪುತ್ರಿ, ಸುಮಾರು 21.2 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ ಬಿರ್ಲಾ ಕುಟುಂಬದ ಕುಡಿ ಅನನ್ಯಾ ಬಿರ್ಲಾ. ಸ್ವತಃ ₹2,000 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿರುವ ಯಶಸ್ವಿ ಉದ್ಯಮಿ ಮತ್ತು ಗಾಯಕಿ. ಇಷ್ಟು ದೊಡ್ಡ ಹಿನ್ನೆಲೆಯಿದ್ದರೂ, ಅವರ ಮಾನವೀಯತೆ ಹಾಗೂ ಸರಳತೆ ಈಗ ಇಡೀ ದೇಶದ ಗಮನ ಸೆಳೆದಿದೆ.
ಇತ್ತೀಚೆಗೆ ಭೀಕರ ಪ್ರವಾಹದಿಂದ ತತ್ತರಿಸಿದ್ದ ಅಸ್ಸಾಂನ ದುರಂತ ಪೀಡಿತ ಪ್ರದೇಶಗಳಿಗೆ ಅನನ್ಯಾ ಬಿರ್ಲಾ ಸ್ವತಃ ಭೇಟಿ ನೀಡಿದ್ದಾರೆ. ಸೊಂಟದ ಮಟ್ಟದ ಕಲುಷಿತ ಪ್ರವಾಹದ ನೀರಿನಲ್ಲಿ ನಡೆದುಕೊಂಡು ಹೋಗಿ, ಅಪಾಯಕಾರಿ ಪರಿಸ್ಥಿತಿಯನ್ನೂ ಲೆಕ್ಕಿಸದೆ ನಿರಾಶ್ರಿತರಿಗೆ, ಬಡ ಜನರಿಗೆ ಆಹಾರ ಮತ್ತು ಅಗತ್ಯ ಪರಿಹಾರ ಸಾಮಗ್ರಿಗಳನ್ನು ಸ್ವತಃ ವಿತರಿಸಿದ್ದಾರೆ.
ಅನನ್ಯಾ ಅವರ ವಿಚಾರಧಾರೆ ಹಾಗೂ ಜೀವನಶೈಲಿ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. “ನಾನು ಪುರುಷರಿಗಿಂತ ಮಹಿಳೆಯರೇ ಶ್ರೇಷ್ಠರು ಎನ್ನುವ ತುಲನೆಯನ್ನು ನಂಬುವುದಿಲ್ಲ, ಸ್ತ್ರೀಸಮಾನತೆ ಎಂದರೆ ಯಾರನ್ನೂ ದ್ವೇಷಿಸುವುದಲ್ಲ” ಎಂದು ಪ್ರತಿಪಾದಿಸುವ ಅವರು, ನೈಜ ಸಬಲೀಕರಣ ಎಂದರೆ ಕರುಣೆ, ಶ್ರಮ ಮತ್ತು ಸಮಾಜ ಸೇವೆಯಲ್ಲಿರುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ವರ್ಷ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರನ್ನು ಭೇಟಿಯಾಗಿ ಸುದ್ದಿಯಲ್ಲಿದ್ದ ಅನನ್ಯಾ, ಇದೀಗ ಅಸ್ಸಾಂ ಪ್ರವಾಹದ ಸಂತ್ರಸ್ತರ ಕಣ್ಣೀರು ಒರೆಸುವ ಮೂಲಕ ಕೋಟ್ಯಂತರ ಜನರ ಮನ ಗೆದ್ದಿದ್ದಾರೆ. “ಯಶಸ್ಸು ಮತ್ತು ಶ್ರೇಷ್ಠತೆ ಸಾಧಿಸಲು ಯಾರನ್ನೂ ಕೀಳಾಗಿ ಕಾಣುವ ಅಗತ್ಯವಿಲ್ಲ, ಕರುಣೆಯೊಂದಿದ್ದರೆ ಸಾಕು” ಎಂಬುದಕ್ಕೆ ಅನನ್ಯಾ ಬಿರ್ಲಾ ಅವರ ಈ ಕಾರ್ಯವೇ ಜೀವಂತ ಸಾಕ್ಷಿಯಾಗಿದೆ.



