ಕೊಟ್ಟೂರು ಪೊಲೀಸ್ ಠಾಣೆ ಮೇಲ್ದರ್ಜೆಗೆ: ಪ್ರಥಮ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಡಿ. ದುರುಗಪ್ಪ ಅಧಿಕಾರ ಸ್ವೀಕಾರ

ಕೊಟ್ಟೂರು (ವಿಜಯನಗರ): ಸ್ಥಳೀಯ ಸಾರ್ವಜನಿಕರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಜಯ ಸಿಕ್ಕಿದ್ದು, ತಾಲ್ಲೂಕಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಮೇಲ್ದರ್ಜೆಗೇರಿದ ಕೊಟ್ಟೂರು ಪೊಲೀಸ್ ಠಾಣೆಯ ಪ್ರಥಮ ಸರ್ಕಲ್ ಇನ್ಸ್ಪೆಕ್ಟರ್ (PI) ಆಗಿ ಡಿ. ದುರುಗಪ್ಪ ಅವರು ಮಂಗಳವಾರ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ನೂತನ ಪಿಐ ಡಿ. ದುರುಗಪ್ಪ, “ನನ್ನ 23 ವರ್ಷಗಳ ಸುದೀರ್ಘ ಪೊಲೀಸ್ ಸೇವೆಯಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಸದಾ ಮೊದಲ ಆದ್ಯತೆ ನೀಡಿದ್ದೇನೆ. ಸಾರ್ವಜನಿಕರ ಸಂಪೂರ್ಣ ಸಹಕಾರದೊಂದಿಗೆ ಕೊಟ್ಟೂರು ತಾಲ್ಲೂಕಿನಲ್ಲಿ ಅಪರಾಧ ತಡೆಗೆ ಮೊದಲ ಆದ್ಯತೆ ನೀಡಿ, ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ನೀಡಲು ಶ್ರಮಿಸುತ್ತೇನೆ,” ಎಂದು ಭರವಸೆ ನೀಡಿದರು.
ಠಾಣೆಗಳ ಪುನರ್ರಚನೆ:
ಸರ್ಕಾರದ ಆದೇಶದಂತೆ ಕೊಟ್ಟೂರು ಠಾಣೆ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ವೃತ್ತದ ಆಡಳಿತಾತ್ಮಕ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸಹಳ್ಳಿ ಠಾಣೆಯನ್ನು ಕೊಟ್ಟೂರು ವೃತ್ತದಿಂದ ಬೇರ್ಪಡಿಸಿ ಕೂಡ್ಲಿಗಿ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಕಚೇರಿ ಮೇಲ್ದರ್ಜೆಗೇರಿದ ಬಳಿಕ ಅನುಭವಿ ಅಧಿಕಾರಿಯೊಬ್ಬರು ಪ್ರಥಮ ಪಿಐ ಆಗಿ ಆಗಮಿಸಿರುವುದು ಸಾರ್ವಜನಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಇತಿಹಾಸದ ಪುಟ ಸೇರಿದ ಗೀತಾಂಜಲಿ ಶಿಂದೆ ಸೇವೆ:
ಕೊಟ್ಟೂರು ಠಾಣೆಯ ಇತಿಹಾಸದಲ್ಲೇ ಪ್ರಥಮ ಮಹಿಳಾ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿ ದಕ್ಷ ಆಡಳಿತ ನೀಡಿದ್ದ ಗೀತಾಂಜಲಿ ಶಿಂದೆ ಅವರು, ಠಾಣೆ ಮೇಲ್ದರ್ಜೆಗೇರುವ ಮುನ್ನ ಕಾರ್ಯನಿರ್ವಹಿಸಿದ ಕೊನೆಯ ಪಿಎಸ್ಐ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ನೂತನ ಇನ್ಸ್ಪೆಕ್ಟರ್ ಡಿ. ದುರುಗಪ್ಪ ಅವರಿಗೆ ಠಾಣೆಯ ಸಿಬ್ಬಂದಿಗಳಾದ ಚಂದ್ರಶೇಖರ ಗೌಡ, ಗುರು ರಾಂಪುರ, ಸಂತೋಷ್, ನಾಗಭೂಷಣ್ ಸೇರಿದಂತೆ ಹಲವು ಸಿಬ್ಬಂದಿಗಳು ಹಾಗೂ ಸ್ಥಳೀಯ ಮುಖಂಡರು ಪುಷ್ಪಗುಚ್ಛ ನೀಡಿ ಗೌರವಿಸಿ, ಶುಭಾಶಯ ಕೋರಿದರು.



