ಸಮಾಜ ಸೇವಕ ಡಾ. ಜಿಗಣಿ ರಾಮಕೃಷ್ಣಗೆ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ಪ್ರದಾನ

ನಿರಂತರ ರಕ್ತದಾನ, ನೇತ್ರದಾನ ಹಾಗೂ ಅಂಗಾಂಗ ದಾನದಂತಹ ನಿಷ್ಕಾಮ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ‘ಹೊಸಬೆಳಕು ಟ್ರಸ್ಟ್’ನ ಸಂಸ್ಥಾಪಕ ಹಾಗೂ ಸಮಾಜ ಸೇವಕ ಡಾ. ಜಿಗಣಿ ರಾಮಕೃಷ್ಣ ಅವರಿಗೆ ಪ್ರತಿಷ್ಠಿತ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ನಂಜರಾಜು ಬಹದ್ದೂರ್ ಛತ್ರದಲ್ಲಿ ‘ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆ’ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌದರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ಜಿಗಣಿ ರಾಮಕೃಷ್ಣ ಅವರು ಉಚಿತ ರಕ್ತದಾನ ಶಿಬಿರಗಳು, ನೇತ್ರದಾನ, ಅಂಗಾಂಗ ದಾನ ಹಾಗೂ ದೇಹದಾನ ಪ್ರೇರಣಾ ಕಾರ್ಯಕ್ರಮಗಳ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ. ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನೂ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಭಾಗವಾಗಿ ‘ಹೊಸಬೆಳಕು ಟ್ರಸ್ಟ್’ ವತಿಯಿಂದ ಸಾರ್ವಜನಿಕರಿಗೆ ನೇತ್ರದಾನ ಹಾಗೂ ಅಂಗಾಂಗ ದಾನದ ಮಹತ್ವ ಸಾರುವ ಮಾಹಿತಿ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷೆ ಶ್ರೀಮತಿ ಹೆಚ್.ಎಲ್. ಯಮುನಾ, ವೇದಿಕೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.



