ಪಡಿತರ ಮತ್ತು ಎಲ್.ಪಿ.ಜಿ ಗ್ರಾಹಕರಿಗೆ ಇ-ಕೆವೈಸಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕೆ.ಎನ್. ಅನುರಾಧ ಸೂಚನೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಎಲ್ಲಾ ಪಡಿತರ ಫಲಾನುಭವಿಗಳು ಹಾಗೂ ಎಲ್.ಪಿ.ಜಿ (ಗ್ಯಾಸ್) ಗ್ರಾಹಕರು ನಿಗದಿತ ಅವಧಿಯೊಳಗೆ ಇ-ಕೆವೈಸಿ (e-KYC) ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ತಿಳಿಸಿದ್ದಾರೆ.
ಪಡಿತರ ಫಲಾನುಭವಿಗಳಿಗೆ ಸೆಪ್ಟೆಂಬರ್ ಅಂತ್ಯದವರೆಗೆ ಗಡುವು:
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 5,12,096 ಪಡಿತರ ಫಲಾನುಭವಿಗಳಿದ್ದಾರೆ. ಈ ಹಿಂದೆ ಇ-ಕೆವೈಸಿ ದೃಢೀಕರಿಸಿ 5 ವರ್ಷ ಪೂರ್ಣಗೊಂಡಿರುವ ಎಲ್ಲಾ ಫಲಾನುಭವಿಗಳು ಕಡ್ಡಾಯವಾಗಿ ಮತ್ತೊಮ್ಮೆ ಇ-ಕೆವೈಸಿ ಮಾಡಿಸಬೇಕಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ (ರೇಷನ್) ಅಂಗಡಿಗಳಿಗೆ ಭೇಟಿ ನೀಡಿ 2026ರ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.
ಎಲ್.ಪಿ.ಜಿ ಗ್ರಾಹಕರಿಗೆ ಆಗಸ್ಟ್ 31 ಕೊನೆಯ ದಿನ:
ಜಿಲ್ಲೆಯ ಎಲ್ಲಾ ಎಲ್.ಪಿ.ಜಿ ಗ್ಯಾಸ್ ಗ್ರಾಹಕರು ತಮ್ಮ ವ್ಯಾಪ್ತಿಯ ಗ್ಯಾಸ್ ಏಜೆನ್ಸಿಗಳಿಗೆ ಅಗತ್ಯ ದಾಖಲೆಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಆಗಸ್ಟ್ 31ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.
ಇ-ಕೆವೈಸಿ ಮಾಡಿಸುವುದರಿಂದ ಗ್ರಾಹಕರ ಮಾಹಿತಿ ನವೀಕರಣಗೊಂಡು, ಅರ್ಹ ಫಲಾನುಭವಿಗಳಿಗೆ ಯಾವುದೇ ಅಡಚಣೆಯಿಲ್ಲದೆ ಸಿಲಿಂಡರ್ ಪೂರೈಕೆಯಾಗಲು ನೆರವಾಗುತ್ತದೆ. ನಿಗದಿತ ಸಮಯದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಂಪರ್ಕದ ಸೇವೆಯಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.



