ಪೊನ್ನಂಪೇಟೆ ಸಿಐಪಿಯು ಕಾಲೇಜಿನಲ್ಲಿ ಭಾರತೀಯ ವಾಯುಪಡೆ ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ಕಾರ್ಯಕ್ರಮ

ಪೊನ್ನಂಪೇಟೆ: ಭಾರತೀಯ ವಾಯುಪಡೆಯು ದೇಶಸೇವೆಯ ಸೌಭಾಗ್ಯದ ಜೊತೆಗೆ ಉಜ್ವಲ ವೃತ್ತಿಜೀವನ ರೂಪಿಸಿಕೊಳ್ಳಲು ವಿಪುಲ ಅವಕಾಶಗಳನ್ನು ಒದಗಿಸುತ್ತದೆ ಎಂದು ಭಟಿಂಡಾದ ಭಾರತೀಯ ವಾಯುಪಡೆಯ ತಾಂತ್ರಿಕ ವಿಭಾಗದ ಫ್ಲೈಯಿಂಗ್ ಆಫೀಸರ್ ಕುಮಾರಿ ಕ್ಷಮಾ ಪೂಣಚ್ಚ ಹೇಳಿದರು.
ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಪ್ರಿ-ಯೂನಿವರ್ಸಿಟಿ (ಸಿಐಪಿಯು) ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಾಯುಪಡೆ ಸೇರ್ಪಡೆ ಹಾಗೂ ತರಬೇತಿ ಕುರಿತು ಸಮಗ್ರ ಮಾಹಿತಿ:
ವಾಯುಪಡೆಯ ಅಧಿಕಾರಿಗಳ ಕರ್ತವ್ಯ, ಜವಾಬ್ದಾರಿ, ಶಿಸ್ತು, ಕಾರ್ಯನಿರ್ವಹಣೆಯ ಸ್ವರೂಪ ಹಾಗೂ ಲಭ್ಯವಿರುವ ವಿವಿಧ ಹುದ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಕ್ಷಮಾ ಪೂಣಚ್ಚ ವಿವರವಾದ ಮಾಹಿತಿ ನೀಡಿದರು. ವಾಯುಪಡೆಗೆ ಸೇರ್ಪಡೆಗೊಳ್ಳಲು ಬೇಕಾಗುವ ಶೈಕ್ಷಣಿಕ ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ತರಬೇತಿಯ ವಿವಿಧ ಹಂತಗಳ ಬಗ್ಗೆ ಬೆಳಕು ಚೆಲ್ಲಿದ ಅವರು, ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು. ರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಸ್ತು, ಆತ್ಮವಿಶ್ವಾಸ ಹಾಗೂ ನಿರಂತರ ಪರಿಶ್ರಮ ಅಗತ್ಯ ಎಂದು ಕರೆ ನೀಡಿದರು.
ಸಂವಾದ ಮತ್ತು ಅನುಮಾನ ಪರಿಹಾರ:
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ರಕ್ಷಣಾ ವಲಯದ ವೃತ್ತಿ ಅವಕಾಶಗಳು ಹಾಗೂ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಳಿದ ಹಲವು ಪ್ರಶ್ನೆಗಳಿಗೆ ಫ್ಲೈಯಿಂಗ್ ಆಫೀಸರ್ ಕ್ಷಮಾ ಪೂಣಚ್ಚ ಅವರು ಸೂಕ್ತ ವಿವರಣೆ ನೀಡಿ ಅನುಮಾನಗಳನ್ನು ನಿವಾರಿಸಿದರು. ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದ ಅವರಿಗೆ ಸಂಸ್ಥೆಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಈ ಕೌನ್ಸೆಲಿಂಗ್ ಕಾರ್ಯಕ್ರಮದ ನೇತೃತ್ವವನ್ನು ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಜನಿ ಪೊನ್ನಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಉಪನ್ಯಾಸಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



