ರಾಜ್ಯದಿಂದ ಪ್ರಶಸ್ತಿ ಪಡೆದ ಏಕೈಕ ಸರ್ಕಾರಿ ಪ್ರೌಢಶಾಲೆ: ಶಾಲೆಯ ಸಮಗ್ರ ಅಭಿವೃದ್ಧಿಗೆ ₹52 ಲಕ್ಷಕ್ಕೂ ಅಧಿಕ ಅನುದಾನ ಬಳಕೆ

ಮೈಸೂರು: ಪಿರಿಯಾಪಟ್ಟಣ ತಾಲ್ಲೂಕಿನ ಅತ್ತಿಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಯು “2025-26ನೇ ಸಾಲಿನ ಸ್ವಚ್ಛ ವಿದ್ಯಾಲಯ ಪುರಸ್ಕಾರ ರಾಷ್ಟ್ರಮಟ್ಟದ ಪ್ರಶಸ್ತಿ” ಗೆ ಭಾಜನವಾಗುವ ಮೂಲಕ ಜಿಲ್ಲೆಗೆ ಹಾಗೂ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದೆ. ಈ ಮಾದರಿ ಶಾಲೆಯ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕಲ್ಪಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಕೊಡುಗೆ ಅಪಾರವಾಗಿದೆ.
ಶಾಲೆಯ ಮೂಲಸೌಕರ್ಯಕ್ಕೆ ಕೋಟಿ ಅನುದಾನದ ಸ್ಪರ್ಶ:
ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ನರೇಗಾ ಯೋಜನೆಯಡಿ ಸುಮಾರು ₹49 ಲಕ್ಷ ಹಾಗೂ 15ನೇ ಹಣಕಾಸು ಅನುದಾನದಡಿ ₹3 ಲಕ್ಷಕ್ಕೂ ಹೆಚ್ಚು ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ:
೧. ನರೇಗಾ ಯೋಜನೆಯಡಿ ಕೈಗೊಂಡ ಪ್ರಮುಖ ಕಾಮಗಾರಿಗಳು:
ಆಟದ ಮೈದಾನ ನಿರ್ಮಾಣ (2015-16): ₹2.95 ಲಕ್ಷ
ಸುಸಜ್ಜಿತ ಕಾಂಪೌಂಡ್ ಗೋಡೆ (2019-20): ₹12 ಲಕ್ಷ
ಮಳೆ ನೀರು ಕೊಯ್ಲು ವ್ಯವಸ್ಥೆ (2020-21): ₹9.50 ಲಕ್ಷ
ಬ್ಯಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ಕೋರ್ಟ್ (2022-23): ₹9.50 ಲಕ್ಷ
ಆಧುನಿಕ ಭೋಜನಾಲಯ (2022-23): ₹14 ಲಕ್ಷ
೨. 15ನೇ ಹಣಕಾಸು ಅನುದಾನದಡಿ ಅಭಿವೃದ್ಧಿ:
ಬೋರ್ವೆಲ್ ಹಾಗೂ ಪೈಪ್ಲೈನ್: ₹40 ಸಾವಿರ
ಕಮೋಡ್ ಶೌಚಾಲಯ ನಿರ್ಮಾಣ: ₹67 ಸಾವಿರ
ಊಟದ ಪ್ಲಾಟ್ಫಾರ್ಮ್ ಹಾಗೂ ಇನ್ಸಿರೇಟರ್ ವ್ಯವಸ್ಥೆ: ₹1.17 ಲಕ್ಷ
ಶಾಲಾ ಕಟ್ಟಡಕ್ಕೆ ಬಣ್ಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಪೈಪ್ಲೈನ್: ₹1.28 ಲಕ್ಷ
ರಾಷ್ಟ್ರಮಟ್ಟದ ಆಯ್ಕೆ ಮಾನದಂಡಗಳು ಹಾಗೂ ರಾಜ್ಯದ ಸಾಧನೆ:
ಕೇಂದ್ರ ಶಿಕ್ಷಣ ಮಂತ್ರಾಲಯವು ಕುಡಿಯುವ ನೀರು, ಶೌಚಾಲಯಗಳ ಸ್ವಚ್ಛತೆ ಮತ್ತು ನಿರ್ವಹಣೆ, ತ್ಯಾಜ್ಯ ನಿರ್ವಹಣೆ, ವಿದ್ಯಾರ್ಥಿಗಳಲ್ಲಿ ನಡವಳಿಕೆ ವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಒಟ್ಟು 6 ವಿಭಾಗಗಳಲ್ಲಿ (100 ಅಂಕಗಳಿಗೆ) ಮೌಲ್ಯಮಾಪನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಿದೆ.
ದೇಶಾದ್ಯಂತ ಆಯ್ಕೆಯಾದ 191 ಶಾಲೆಗಳ ಪೈಕಿ ಕರ್ನಾಟಕದ 3 ಶಾಲೆಗಳು ಪ್ರಶಸ್ತಿಗೆ ಭಾಜನವಾಗಿವೆ. ಸರ್ಕಾರಿ ಪ್ರೌಢಶಾಲೆಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದ ರಾಜ್ಯದ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಅತ್ತಿಗೋಡು ಶಾಲೆ ಪಾತ್ರವಾಗಿದೆ. (ಉಡುಪಿಯ ಮುಲ್ಕಾಡು ಎಲ್ಲಾರೆ ಕೆ.ಪಿ.ಎಸ್ ಹಾಗೂ ಬೆಂಗಳೂರು ಗ್ರಾಮಾಂತರದ ಕನ್ನಮಂಗಲ ಎಚ್.ಪಿ.ಎಸ್ ಇತರ ಎರಡು ಪ್ರಶಸ್ತಿ ವಿಜೇತ ಶಾಲೆಗಳು).
ಸಾಧಕರ ನುಡಿ:
”ನಮ್ಮ ಶಾಲೆಯ ಅಭಿವೃದ್ಧಿಗೆ ನರೇಗಾ ಯೋಜನೆಯಡಿ ಅಪಾರ ನೆರವು ದೊರೆತಿದೆ. ಗ್ರಾಮ ಪಂಚಾಯಿತಿಯ ಸಹಕಾರ ಹೆಚ್ಚಿದಷ್ಟು ಸರ್ಕಾರಿ ಶಾಲೆಗಳು ಮಾದರಿಯಾಗಿ ಬೆಳೆಯಲು ಸಾಧ್ಯ ಎಂಬುದಕ್ಕೆ ನಮ್ಮ ಶಾಲೆಯೇ ಸಾಕ್ಷಿ.”
— ನಾಗಶೆಟ್ಟಿ, ಮುಖ್ಯಶಿಕ್ಷಕರು, ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ
”ನಮ್ಮ ತಾಲ್ಲೂಕಿನ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷ ತಂದಿದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರ ಹಾಗೂ ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಂಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ.”
— ಸುನಿಲ್ ಕುಮಾರ್ ಡಿ.ಬಿ., ಕಾರ್ಯನಿರ್ವಾಹಕ ಅಧಿಕಾರಿಗಳು (EO), ಪಿರಿಯಾಪಟ್ಟಣ



