ಕುಶಾಲನಗರ ಪುರಸಭೆ ಕಚೇರಿಯೊಳಗೆ ಬಿಜೆಪಿ ನಾಯಕರಿಂದ ಮೀನು ಮಾರಾಟ: ವಿನೂತನ ಪ್ರತಿಭಟನೆ!

ಕುಶಾಲನಗರ: ಅರಣ್ಯ ಇಲಾಖೆ ಕಚೇರಿ ಮುಂಭಾಗ ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಅಲೆಮಾರಿ ಬೆಸ್ತ ಜನಾಂಗದವರ ಮೀನು ಮಾರಾಟ ಅಂಗಡಿಯನ್ನು ದಿಢೀರ್ ತೆರವುಗೊಳಿಸಿರುವುದನ್ನು ಖಂಡಿಸಿ, ಬಿಜೆಪಿ ಪ್ರಮುಖರು ಕುಶಾಲನಗರ ಪುರಸಭೆ ಕಚೇರಿಯ ಒಳಗಡೆಯೇ ಮೀನು ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಕಿರುಕುಳ ವಿರುದ್ಧ ಬಿಜೆಪಿ ನಾಯಕ ಭಾಸ್ಕರ್ ನಾಯಕ್ ಆಕ್ರೋಶ:
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಭಾಸ್ಕರ್ ನಾಯಕ್, “ನದಿಗಳಲ್ಲಿ ಮೀನು ಹಿಡಿದು ರಸ್ತೆಬದಿಯಲ್ಲಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಅಲೆಮಾರಿ ಬೆಸ್ತ ಜನಾಂಗದ ಕುಟುಂಬವನ್ನು ಪುರಸಭೆ ಅಧಿಕಾರಿಗಳು ಹಠಾತ್ತನೆ ತೆರವುಗೊಳಿಸಿರುವುದು ಅತ್ಯಂತ ಖಂಡನೀಯ. ಅದೇ ರಸ್ತೆಯಲ್ಲಿ ಸಾಲು ಸಾಲು ಅಂಗಡಿಗಳಿದ್ದರೂ ಕೇವಲ ಈ ಒಂದೇ ಅಂಗಡಿಯನ್ನು ಗುರಿಯಾಗಿಸಿ ತೆರವುಗೊಳಿಸಲಾಗಿದೆ,” ಎಂದು ಕಿಡಿಕಾರಿದರು.
ಇತ್ತೀಚಿನ ದಿನಗಳಲ್ಲಿ ದಿನವೊಂದಕ್ಕೆ 100-200 ರೂಪಾಯಿ ದುಡಿದು ಹೊಟ್ಟೆ ಹೊರೆಯುವ ಬಡ ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ಸಣ್ಣ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಒತ್ತಾಯಿಸಿದರು.
ಈ ವಿನೂತನ ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಚರಣ್, ಮಧುಸೂದನ್, ಕೃಷ್ಣಪ್ಪ, ಪ್ರಶಾಂತ್, ಸುಮನ್, ರಾಮು ಸೇರಿದಂತೆ ಹಲವು ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.



