ಕಲಬುರಗಿ: ಬಸ್ನಲ್ಲಿ ವಿದ್ಯಾರ್ಥಿಯಿಂದ ಟಿಕೆಟ್ ವಿತರಣೆ; ಕೆಕೆಆರ್ಟಿಸಿ ಸಿಬ್ಬಂದಿ ಅಮಾನತು

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್ಟಿಸಿ) ಬಸ್ನಲ್ಲಿ ಚಾಲಕ-ಕಂ-ನಿರ್ವಾಹಕನೊಬ್ಬ ವಿದ್ಯಾರ್ಥಿಯ ಕೈಯಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡಿಸಿದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದಡಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಕಲಬುರಗಿ ವಿಭಾಗ-1ರ ವ್ಯಾಪ್ತಿಯ ಕಾಳಗಿ ಘಟಕದ ಚಾಲಕ-ಕಂ-ನಿರ್ವಾಹಕ ಸಿದ್ದಪ್ಪ (ಸಂಖ್ಯೆ: 7785) ಅಮಾನತಾದ ನೌಕರ.
ಪ್ರಕರಣದ ಹಿನ್ನೆಲೆ:
ಆಗಸ್ಟ್ 18 ರಂದು ಕಾಳಗಿ-ಕಲಬುರಗಿ-ಮಂಗಲಗಿ ಮಾರ್ಗದ (KA-32 F-2066) ಬಸ್ನಲ್ಲಿ ಸಿದ್ದಪ್ಪ ಕರ್ತವ್ಯದಲ್ಲಿದ್ದರು. ಬಸ್ಸು ಕಲಬುರಗಿ ಸೂಪರ್ ಮಾರ್ಕೆಟ್ ಬಸ್ ನಿಲ್ದಾಣಕ್ಕೆ ಬಂದಾಗ, ಅವರು ತಮ್ಮ ಜವಾಬ್ದಾರಿಯಲ್ಲಿದ್ದ ಇಟಿಎಂ (ETM) ಟಿಕೆಟ್ ಯಂತ್ರವನ್ನು ಬಸ್ಸಿನಲ್ಲೇ ಬಿಟ್ಟು ಹೊರ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಬಸ್ಸಿನಲ್ಲಿದ್ದ ಶಾಲಾ ವಿದ್ಯಾರ್ಥಿಯೊಬ್ಬ ಇಟಿಎಂ ಯಂತ್ರದ ಮೂಲಕ ಇತರ ಪ್ರಯಾಣಿಕರಿಗೆ ಬರೋಬ್ಬರಿ 11 ಟಿಕೆಟ್ಗಳನ್ನು ವಿತರಿಸಿದ್ದ.
ಈ ಸಂಪೂರ್ಣ ದೃಶ್ಯವನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವೀಡಿಯೋ ತೀವ್ರ ವೈರಲ್ ಆಗಿ ಸಂಸ್ಥೆಯ ಘನತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ, ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ. ಗಂಗಾಧರ ಅವರು ತನಿಖೆ ನಡೆಸಿ, ನೌಕರರ ಶಿಸ್ತು ನಿಯಮಾವಳಿಯಡಿ ಸಿದ್ದಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.



