ಮುಂಜಾಗ್ರತೆ ಇಲ್ಲದೆ ಕಂಬಕ್ಕೇರಿದ ಯುವಕನಿಗೆ ಕರೆಂಟ್ ಶಾಕ್: ಸ್ಥಳದಲ್ಲೇ ಸಾವು

ದೇವನಹಳ್ಳಿ: ವಿದ್ಯುತ್ ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಭೀಕರ ವಿದ್ಯುತ್ ಆಘಾತಕ್ಕೊಳಗಾಗಿ ವ್ಯಕ್ತಿಯೊಬ್ಬರು ಕಂಬದ ಮೇಲೆಯೇ ಪ್ರಾಣ ಬಿಟ್ಟಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಪಾಲಯ್ಯ (35) ಮೃತ ದುರ್ದೈವಿ.
ಘಟನೆಯ ವಿವರ:
ದೇವನಹಳ್ಳಿ ಪಟ್ಟಣದ ಮರಿಶಾಮಪ್ಪ ಬಡಾವಣೆ ಎದುರಿನ ಜಮೀನೊಂದರಲ್ಲಿ ಸಂಜೆ ಸುಮಾರಿಗೆ 11 ಕೆವಿ ಕಂಬದ ಮೇಲೆ ಪಾಲಯ್ಯ ವಿದ್ಯುತ್ ಕೆಲಸ ಮಾಡಲು ಹತ್ತಿದ್ದರು. ಆದರೆ, ಕೆಲಸ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದ ಪರಿಣಾಮ, ಕಂಬದ ಮೇಲಿದ್ದ ಪಾಲಯ್ಯ ಅವರಿಗೆ ತೀವ್ರ ಸ್ವರೂಪದ ಶಾಕ್ ಹೊಡೆದು, ಅವರು ಕಂಬದ ಮೇಲೆಯೇ ಕೊನೆಯುಸಿರೆಳೆದಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯಿಂದ ಮೃತದೇಹ ತೆರವು:
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೇವನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ, ಕಂಬದ ಮೇಲಿದ್ದ ಮೃತದೇಹವನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.
ಮೃತ ಪಾಲಯ್ಯ ಅವರು ಯಾವ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದರು? ಅವರನ್ನು ಅಲ್ಲಿಗೆ ಕೆಲಸಕ್ಕೆ ಕಳುಹಿಸಿದ್ದು ಯಾರು? ಎಂಬಿತ್ಯಾದಿ ಕೋನಗಳಲ್ಲಿ ದೇವನಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದು, ಸಂಪೂರ್ಣ ತನಿಖೆಯ ನಂತರವೇ ಘಟನೆಗೆ ನಿಖರ ಕಾರಣ ಏನೆಂಬುದು ತಿಳಿದುಬರಬೇಕಿದೆ.



