ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ಗೆ ಇಂದು ಮಹತ್ವದ ದಿನ, ಅಪ್ರೂವರ್ ಪ್ರದೋಷ್ ವಿಚಾರಣೆ ಮುಂದಕ್ಕೆ?

ಬೆಂಗಳೂರು: ಇಡೀ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ವಿಚಾರಣೆ ಇಂದು (ಸೆಪ್ಟೆಂಬರ್ 2) ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಪ್ರಕರಣದ 2ನೇ ಆರೋಪಿ ನಟ ದರ್ಶನ್ ತೂಗುದೀಪ ಪಾಲಿಗೆ ಇಂದಿನ ದಿನ ಅತ್ಯಂತ ನಿರ್ಣಾಯಕವೆನಿಸಿದೆ.
ಪ್ರದೋಷ್ ಅಪ್ರೂವರ್ ಆಗಲು ದರ್ಶನ್ ಆಕ್ಷೇಪ
ಪ್ರಕರಣದ 14ನೇ ಆರೋಪಿ ಪ್ರದೋಷ್, ಸರ್ಕಾರಿ ಸಾಕ್ಷಿ (ಅಪ್ರೂವರ್) ಆಗಲು ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರು ಮಾನ್ಯ ಮಾಡಿದ್ದರು. ಅಲ್ಲದೆ, ಸೆಪ್ಟೆಂಬರ್ 2 ರಂದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿಯುವಂತೆ ಪ್ರದೋಷ್ಗೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ, ಪ್ರದೋಷ್ ಅಪ್ರೂವರ್ ಆಗುವುದನ್ನು ವಿರೋಧಿಸಿ ದರ್ಶನ್ ಪರ ಹಿರಿಯ ನ್ಯಾಯವಾದಿ ಹಷ್ಮತ್ ಪಾಷಾ ಅವರು ಹೈಕೋರ್ಟ್ಗೆ ತುರ್ತು ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ನಿರ್ದೇಶನ, ವಿಚಾರಣಾ ನ್ಯಾಯಾಲಯಕ್ಕೆ ಮರುಪರಿಶೀಲನೆ ಸೂಚನೆ
ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸುವಂತೆ ಸೂಚಿಸಿದ್ದಾರೆ. ಜೈಲಾಧಿಕಾರಿಗಳು ಹಾಗೂ ಪ್ರೊಬೇಷನ್ ಅಧಿಕಾರಿಯ ವರದಿಗಳನ್ನು ಬದಿಗಿಟ್ಟು, ಕಾನೂನಿನ ಚೌಕಟ್ಟಿನಲ್ಲಿ 2 ದಿನಗಳ ಒಳಗಾಗಿ ಹೊಸ ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಇಂದು ಸಾಕ್ಷಿ ದಾಖಲಾತಿ ಅನುಮಾನ!
ಹೈಕೋರ್ಟ್ ಮರುಪರಿಶೀಲನೆಗೆ ಸಮಯ ನೀಡಿರುವ ಹಿನ್ನೆಲೆಯಲ್ಲಿ, ಇಂದು ಪ್ರದೋಷ್ ಅಪ್ರೂವರ್ ಆಗಿ ಸಾಕ್ಷಿ ನುಡಿಯುವ ಸಾಧ್ಯತೆ ಕ್ಷೀಣಿಸಿದೆ. 59ನೇ ಸಿಸಿಹೆಚ್ ನ್ಯಾಯಾಲಯವು ಹೈಕೋರ್ಟ್ ಆದೇಶದಂತೆ ಪುನಃ ವಿಚಾರಣೆ ನಡೆಸಿ ಹೊಸ ತೀರ್ಪು ಪ್ರಕಟಿಸಿದ ನಂತರವಷ್ಟೇ ಪ್ರದೋಷ್ ಸಾಕ್ಷಿ ಹೇಳಿಕೆ ದಾಖಲಾಗಲಿದೆ. ಆದರೂ, ಇಂದು ನ್ಯಾಯಾಲಯದ ಮುಂದಿನ ಕಾನೂನಾತ್ಮಕ ನಡಾವಳಿಗಳು ಹಾಗೂ ಪ್ರದೋಷ್ ಹಾಜರಾತಿ ಕುರಿತು ಸಾರ್ವಜನಿಕ ಮತ್ತು ವಕೀಲರ ವಲಯದಲ್ಲಿ ತೀವ್ರ ಕುತೂಹಲ ಮೂಡಿದೆ.



