ಸಿದ್ದಾಪುರ: ಶಾಲೆಗಳ ಮುಂಭಾಗದಲ್ಲಿ ತ್ಯಾಜ್ಯದ ರಾಶಿ, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಮಕ್ಕಳು

ಸಿದ್ದಾಪುರ: ಸಿದ್ದಾಪುರದ ಪ್ರಮುಖ ಶಾಲೆಗಳ ಮುಂಭಾಗದಲ್ಲೇ ಕೊಳೆತ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಶಾಲಾ ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಇಲ್ಲಿಯ ವಿರಾಜಪೇಟೆ ರಸ್ತೆಯಲ್ಲಿರುವ ಸಂತ ಅನ್ನಮ್ಮ ಶಾಲೆ ಹಾಗೂ ಸರ್ಕಾರಿ ಮಲಯಾಳಂ ಶಾಲೆಯ ತೀರಾ ಸಮೀಪದಲ್ಲೇ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಅಡ್ಡಾದಿಡ್ಡಿಯಾಗಿ ಸುರಿಯಲಾಗಿದೆ. ನಿರಂತರವಾಗಿ ಬೀಳುತ್ತಿರುವ ಮಳೆಯಿಂದಾಗಿ ತ್ಯಾಜ್ಯವೆಲ್ಲ ಕೊಳೆತು ನಾರುತ್ತಿದ್ದು, ಅದರಲ್ಲಿ ಹುಳಗಳು ಕಾಣಿಸಿಕೊಂಡಿವೆ. ದುರ್ವಾಸನೆಯಿಂದಾಗಿ ಪುಟ್ಟ ಮಕ್ಕಳು ನಿತ್ಯ ಮೂಗು ಮುಚ್ಚಿಕೊಂಡೇ ಶಾಲೆಗೆ ತೆರಳುವಂತಾಗಿದೆ.
ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ:
ಪರಿಸರ ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿ ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಹಾಗೂ ಪೋಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಥಳೀಯ ಆಡಳಿತವು ತಕ್ಷಣವೇ ಎಚ್ಚೆತ್ತುಕೊಂಡು ಶಾಲಾ ಮುಂಭಾಗದಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಹಾಗೂ ಸಾರ್ವಜನಿಕ ರಸ್ತೆ ಬದಿಗಳಲ್ಲಿ ಅಕ್ರಮವಾಗಿ ತ್ಯಾಜ್ಯ ಚೆಲ್ಲುವ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಮತ್ತು ಪೋಷಕರು ಕಟ್ಟುನಿಟ್ಟಾಗಿ ಆಗ್ರಹಿಸಿದ್ದಾರೆ.



