ಪತ್ನಿಯ ಅಕ್ರಮ ಸಂಬಂಧದ ಶಂಕೆ: ಹೆಂಡತಿಯನ್ನು ಕೊಂದ ವಿಡಿಯೋ ಮಾಡಿ ಬೇಕರಿ ಮಾಲೀಕ ಆತ್ಮಹತ್ಯೆ!

ಹಾಸನ (ಆಗಸ್ಟ್ 02): ಪತ್ನಿಯ ಶಂಕಿತ ಅಕ್ರಮ ಸಂಬಂಧ ಹಾಗೂ ದಾಂಪತ್ಯ ಕಲಹಕ್ಕೆ ಮನನೊಂದು ಬೇಕರಿ ಮಾಲೀಕನೊಬ್ಬ ಪತ್ನಿಯನ್ನು ಹತ್ಯೆಗೈದು, ಬಳಿಕ ತಾನೂ ನೇಣಿಗೆ ಶರಣಾಗಿರುವ ದೋರ ದುರಂತ ಘಟನೆ ಹಾಸನ ಹಾಗೂ ಚಿಕ್ಕಮಗಳೂರು ಗಡಿಭಾಗದಲ್ಲಿ ನಡೆದಿದೆ. ಘಟನೆಯಿಂದಾಗಿ ಇಬ್ಬರು ಮುದ್ದು ಮಕ್ಕಳು ಅನಾಥರಾಗಿದ್ದಾರೆ.
ಬೇಲೂರು ತಾಲೂಕಿನ ಕೆಸಗೋಡು ನಿವಾಸಿ, ಚಿಕ್ಕಮಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದ ರಘು ಮೃತಪಟ್ಟ ದುರ್ದೈವಿ.
ಡೆತ್ ನೋಟ್ ವಿಡಿಯೋ ಮಾಡಿ ಆತ್ಮಹತ್ಯೆ:
ಸುಮಾರು 10 ವರ್ಷಗಳ ಹಿಂದೆ ರಘು ಹಾಗೂ ಗಗನಾ ಎಂಬುವವರ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಪತ್ನಿಯ ನಡವಳಿಕೆ ಹಾಗೂ ಅನೈತಿಕ ಸಂಬಂಧದ ಬಗ್ಗೆ ರಘು ಅನುಮಾನ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ದಂಪತಿ ನಡುವೆ ನಿರಂತರ ಗಲಾಟೆ ನಡೆಯುತ್ತಿತ್ತು.
ಘಟನೆಯ ದಿನ ರಘು ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. “ಹತ್ತು ವರ್ಷದಿಂದ ನಾನು ನರಕ ಅನುಭವಿಸಿದ್ದೇನೆ. ಪತ್ನಿಯ ನಡವಳಿಕೆ ತಡೆಯಲಾಗದೆ ಅವಳನ್ನು ಮುಗಿಸಿದ್ದೇನೆ. ಅವಳನ್ನು ಹುಡುಕಬೇಡಿ, ನಾನೂ ಇರುವುದಿಲ್ಲ” ಎಂದು ಹೇಳಿ ವಿಡಿಯೋ ಮುಗಿಸಿದ್ದ. ವಿಡಿಯೋ ನೋಡಿದ ಕುಟುಂಬಸ್ಥರು ಹುಡುಕಾಟ ನಡೆಸುವಷ್ಟರಲ್ಲಿ ಕೆಸಗುಲಿಯ ತೋಟದಲ್ಲಿ ರಘು ನೇಣುಬಿಗಿದುಕೊಂಡು ಶವವಾಗಿ ಪತ್ತೆಯಾಗಿದ್ದಾನೆ.
ಬಾವನ ವಿರುದ್ಧ ಶೋಷಣೆಯ ಆರೋಪ ಮಾಡಿದ ಪತ್ನಿಯ ಸಹೋದರ:
ಮತ್ತೊಂದೆಡೆ, ಮೃತ ಗಗನಾಳ ಸಹೋದರ ರಘು ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ನನ್ನ ಅಕ್ಕ ಆತನ ಮನೆಯಲ್ಲಿ ಜೀತದಾಳಂತೆ ದುಡಿಯುತ್ತಿದ್ದಳು. ರಘು ಆಕೆಗೆ ನಿತ್ಯ ಹಲ್ಲೆ ನಡೆಸಿ ಕ್ರೌರ್ಯ ಮೆರೆಯುತ್ತಿದ್ದ. ರಘು ಮಾಡುತ್ತಿರುವ ಅಕ್ರಮ ಸಂಬಂಧದ ಆರೋಪಗಳೆಲ್ಲವೂ ಸುಳ್ಳು” ಎಂದು ಅವರು ಆರೋಪಿಸಿದ್ದಾರೆ.
ಅನಾಥರಾದ ಮಕ್ಕಳು – ಮುಂದುವರಿದ ಶೋಧ:
ಪ್ರಸ್ತುತ ಪೊಲೀಸರು ರಘುನ ಮೃತದೇಹವನ್ನು ವಶಕ್ಕೆ ಪಡೆದಿದ್ದು, ಹತ್ಯೆಯಾಗಿದ್ದಾಳೆ ಎನ್ನಲಾದ ಪತ್ನಿ ಗಗನಾಳ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮುದ್ದು ಮಕ್ಕಳು ಅನಾಥವಾಗಿದ್ದು, ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



