ಹಾಲು ಸಂಘದ ₹11.40 ಲಕ್ಷ ಹಣ ದುರುಪಯೋಗ ಆರೋಪ – ಮಾಜಿ ಕಾರ್ಯದರ್ಶಿ ಸೇರಿ ಐವರ ವಿರುದ್ಧ ಎಫ್ಐಆರ್

ರಾಣೇಬೆನ್ನೂರು: ತಾಲೂಕಿನ ದಂಡಗಿಹಳ್ಳಿ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಸಾರ್ವಜನಿಕ ನಿಧಿಯ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಅಕ್ರಮವಾಗಿ ದುರುಪಯೋಗಪಡಿಸಿಕೊಂಡ ಆರೋಪದಡಿ ಮಾಜಿ ಕಾರ್ಯದರ್ಶಿ ಹಾಗೂ ಮಾಜಿ ಅಧ್ಯಕ್ಷ ಸೇರಿದಂತೆ ಐವರ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಗೇರಿ ಪೊಲೀಸರು ಬಿ.ಎನ್.ಎಸ್.-2023ರ ಕಲಂ 314, 316 ಹಾಗೂ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಬ್ಯಾಂಕ್ ಖಾತೆ ವಹಿವಾಟಿನಲ್ಲಿ ಅಕ್ರಮ?
ದಂಡಗಿಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಕರ್ನಾಟಕ ಗ್ರಾಮೀಣ ಬ್ಯಾಂಕ್ (ಹಲಗೇರಿ ಶಾಖೆ) ಖಾತೆಯ ಸ್ಟೇಟ್ಮೆಂಟ್ ಪರಿಶೀಲಿಸಿದ ವೇಳೆ ಹಲವು ಹಂತಗಳಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ.
ಮಾಜಿ ಕಾರ್ಯದರ್ಶಿ ಪತ್ನಿ: ₹7,30,086
ಮಾಜಿ ಅಧ್ಯಕ್ಷ: ₹2,40,034
ಮತ್ತೊಬ್ಬ ಆರೋಪಿ: ₹1,70,010
ಹೀಗೆ ಒಟ್ಟು ₹11,40,130 ಸಂಘದ ನಿಧಿಯನ್ನು ಆರೋಪಿಗಳು ಒಳಸಂಚು ನಡೆಸಿ ಪರಸ್ಪರ ಖಾತೆಗಳಿಗೆ ವರ್ಗಾಯಿಸಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.
ಕಟ್ಟುನಿಟ್ಟಿನ ತನಿಖೆಗೆ ಆಗ್ರಹ:
ಸಹಕಾರ ಸಂಘದ ಹಣವೇ ದುರುಪಯೋಗವಾಗಿರುವ ಆರೋಪ ಕೇಳಿಬಂದಿರುವುದು ದಂಡಗಿಹಳ್ಳಿ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. “ಹಾಲು ಉತ್ಪಾದಕರ ಹಣ ದುರುಪಯೋಗವಾಗಿರುವುದು ಗಂಭೀರ ವಿಚಾರ. ತನಿಖೆಯಿಂದ ಸಂಪೂರ್ಣ ಸತ್ಯಾಸತ್ಯತೆ ಹೊರಬಂದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಬ್ಯಾಂಕ್ ವಹಿವಾಟು, ದಾಖಲೆಗಳು ಹಾಗೂ ಆರೋಪಿಗಳ ಪಾತ್ರದ ಕುರಿತು ಹಲಗೇರಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



