ಜಮಖಂಡಿ ತುಂಗಳ ಶಾಲೆಯಲ್ಲಿ 150ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನ

ಜಮಖಂಡಿ: ನಗರದ ತುಂಗಳ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದ ಅಂಗವಾಗಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ವಿಶೇಷ ಭಾವಚಿತ್ರ ಪ್ರದರ್ಶನವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರರ ಸಂಶೋಧನಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ರಾಧಾಶ್ರೀ ಡಾ. ಜಿ.ಜೆ. ಮೆಹೆಂದಳೆ ಅವರು ಸ್ವತಃ ಚಿತ್ರಿಸಿರುವ 150ಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರ ಅಪರೂಪದ ಭಾವಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಮುಂದಿನ ಪೀಳಿಗೆಗೆ ದೇಶದ ಮುಕ್ತಿಗಾಗಿ ತ್ಯಾಗಬಲಿಧಾನ ನೀಡಿದ ಮಹನೀಯರ ಪರಿಚಯ ಹಾಗೂ ದೇಶಪ್ರೇಮದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಸಾಧಕರಿಗೆ ಸನ್ಮಾನ:
ಧ್ವಜಾರೋಹಣ ನೆರವೇರಿದ ಬಳಿಕ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳನ್ನು ಬಿಡಿಸಿದ ಡಾ. ಜಿ.ಜೆ. ಮೆಹೆಂದಳೆ ಅವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿದ್ದ ನಾಗಾಲ್ಯಾಂಡ್ ವಿಶ್ವವಿದ್ಯಾಲಯದ ಪ್ರೊ. ಶಶಿಕಾಂತ್ ಡಿ.ಎಚ್. ಅವರಿಗೂ ಸನ್ಮಾನ ನೆರವೇರಿಸಲಾಯಿತು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ತುಂಗಳ ಶಾಲೆಯ ಆಡಳಿತಾಧಿಕಾರಿ ಸುಮಂತ್, ಲಕ್ಷ್ಮಿ ಅಶೋಕ ತುಂಗಳ್, ಪ್ರಾಂಶುಪಾಲರಾದ ಲಿಂಗರಾಜು ಕೆ., ಪಿಯು ಕಾಲೇಜಿನ ಪ್ರಾಂಶುಪಾಲ ಸುರೇಶ ಹವಾಲ್ದಾರ್, ಶಿವಕುಮಾರ್ ಕಟಪುರಮಠ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



