ಹನೂರು ಶೂಟೌಟ್ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ ೪ನೇ ಆರೋಪಿ ಮಹಿಮಾದಾಸ್!

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಿದ ಶೂಟೌಟ್ ವೇಳೆ ಪರಾರಿಯಾಗಿದ್ದ ಮರಿಯಮಂಗಲ ಗ್ರಾಮದ ಮಹಿಮಾದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಈ ಪ್ರಕರಣದ ೪ನೇ ಆರೋಪಿಯಾಗಿರುವ ಮಹಿಮಾದಾಸ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ, ಆತನ ವಿಡಿಯೋ ಹೇಳಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದೆ.
”ನನ್ನನ್ನು ಪೊಲೀಸರೇ ನೋಡಿಕೊಳ್ಳಬೇಕು!”
ವಿಡಿಯೋದಲ್ಲಿ ಘಟನೆಯನ್ನು ವಿವರವಾಗಿ ಹಂಚಿಕೊಂಡಿರುವ ಮಹಿಮಾದಾಸ್, “ನಾನು ಬೆಟ್ಟದಿಂದ ಕೆಳಗಿಳಿದು ಬಂದಾಗ ಬೆಳಗಿನ ಜಾವ ಸರಿ ಸುಮಾರು ೫.೨೦ ಆಗಿತ್ತು. ಆ ಸಮಯದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ತಕ್ಷಣವೇ ಶೂಟ್ ಮಾಡಲು ಶುರುಮಾಡಿದರು. ಭಯಗೊಂಡು ನಾನು ಅಲ್ಲಿಂದ ಓಡಿ ಹೋದೆ. ೫ ನಿಮಿಷಗಳ ನಂತರ ಯಾವುದೇ ಶಬ್ದ ಕೇಳಿಸಲಿಲ್ಲ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಮನೆಗೆ ತಲುಪಿದೆ, ಬಳಿಕ ಮನೆಯವರು ಆಸ್ಪತ್ರೆಗೆ ಸೇರಿಸಿದರು. ಈಗ ಅರಣ್ಯ ಇಲಾಖೆಯವರು ನನ್ನನ್ನು ಹುಡುಕುತ್ತಿದ್ದು ನನಗೆ ತೀವ್ರ ಭಯವಾಗುತ್ತಿದೆ. ಹೀಗಾಗಿ ಪೊಲೀಸರೇ ನನ್ನನ್ನು ನೋಡಿಕೊಳ್ಳಬೇಕು” ಎಂದು ಮನವಿ ಮಾಡಿದ್ದಾನೆ.
ಮ್ಯಾಜಿಸ್ಟ್ರೇಟ್ ತನಿಖೆ ತೀವ್ರ
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ಯ ತೀವ್ರ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ ಈ ಶೂಟೌಟ್ ಘಟನೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಗತಿಯಲ್ಲಿದ್ದು, ಆರೋಪಿ ಮಹಿಮಾದಾಸ್ ನೀಡಿರುವ ಈ ಹೇಳಿಕೆ ಹಾಗೂ ಬಯಲಿಗೆಳೆದ ಅಂಶಗಳು ತನಿಖೆಗೆ ಅತ್ಯಂತ ಪ್ರಮುಖ ಹಾಗೂ ಹೊಸ ತಿರುವನ್ನು ನೀಡಿವೆ.



