ಬಾಗಲಕೋಟೆ: ಪ್ರೇಮಿಗಳ ನಡುವೆ ವೈಮನಸ್ಸು; ಜಗಳದಿಂದ ಮನನೊಂದು ಇಬ್ಬರೂ ಆತ್ಮಹತ್ಯೆ

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು, ಪರಸ್ಪರ ವೈಮನಸ್ಸಿನಿಂದ ಮನನೊಂದ ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರನ್ನು ಬನಹಟ್ಟಿಯ ಕೆಎಚ್ಡಿಸಿ ಕಾಲೋನಿಯ ನಿವಾಸಿ ಪವಿತ್ರಾ (19) ಮತ್ತು ಆಸಂಗಿ ಗ್ರಾಮದ ಕಾರ್ತಿಕ್ (20) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬುಧವಾರದಂದು ಇಬ್ಬರ ನಡುವೆ ಸಣ್ಣ ವಿಷಯಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ.
ಈ ಜಗಳದಿಂದ ತೀವ್ರವಾಗಿ ಮನನೊಂದ ಪವಿತ್ರಾ ಅವರು ಮೊದಲು ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದ ಕಾರ್ತಿಕ್ ಅವರು ಪವಿತ್ರಾ ಅವರ ಸಾವಿನ ದುಃಖವನ್ನು ತಾಳಲಾರದೆ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಬನಹಟ್ಟಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಸಾವಿನಿಂದ ಆಸಂಗಿ ಗ್ರಾಮ ಹಾಗೂ ಕೆಎಚ್ಡಿಸಿ ಕಾಲೋನಿಯಲ್ಲಿ ಮೌನ ಆವರಿಸಿದ್ದು, ಪೋಷಕರ ಕ್ರಂದನ ಮುಗಿಲು ಮುಟ್ಟಿದೆ. ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.



