ಶ್ರೀ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ಯಜುರ್ ಉಪಾಕರ್ಮ – ನೂರಾರು ವಿಪ್ರರಿಂದ ಜನಿವಾರ ಧಾರಣೆ

ವಿಜಯನಗರದಲ್ಲಿರುವ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಯಜುರ್ ಉಪಾಕರ್ಮ ಕಾರ್ಯಕ್ರಮವು ಅತ್ಯಂತ ಸಂಭ್ರಮ-ಸಂಪ್ರದಾಯಗಳೊಂದಿಗೆ ನೆರವೇರಿತು.
ನೂರಾರು ವಿಪ್ರರು ಭಾಗವಹಿಸಿ ಸಂಧ್ಯಾವಂದನೆ, ಗಾಯತ್ರಿ ಜಪ ಹಾಗೂ ಪಿತೃ ತರ್ಪಣ ನೆರವೇರಿಸುವ ಮೂಲಕ ಸಾಮೂಹಿಕವಾಗಿ ಜನಿವಾರ (ಯಜ್ಞೋಪವೀತ) ಬದಲಾಯಿಸಿಕೊಂಡು ಹಬ್ಬವನ್ನು ಆಚರಿಸಿದರು.
ಸನಾತನ ಧರ್ಮದಲ್ಲಿ ಉಪಾಕರ್ಮದ ಮಹತ್ವ:
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್, “ಸನಾತನ ಹಿಂದೂ ಧರ್ಮದಲ್ಲಿ ವೇದ ಹಾಗೂ ಶಾಸ್ತ್ರ ಅಧ್ಯಯನಕ್ಕೆ ವಿಶೇಷ ಮಹತ್ವವಿದೆ. 8ನೇ ವಯಸ್ಸಿಗೆ ವಟುವಿಗೆ ಉಪನಯನ ಮಾಡಿ ಗಾಯತ್ರಿ ಮಂತ್ರ ಉಪದೇಶಿಸುವ ಪರಂಪರೆ ನಮ್ಮಲ್ಲಿದೆ. ಋಷಿಗಳಿಗೆ ಪೂಜೆ ಸಲ್ಲಿಸಿ ಜನಿವಾರ ಧಾರಣೆ ಮಾಡುವ ಉಪಾಕರ್ಮವು ಧರ್ಮರಕ್ಷಣೆಯ ಪ್ರತೀಕ” ಎಂದು ಹೇಳಿದರು.
ಪಾಪ ಮುಕ್ತಿ ಹಾಗೂ ಋಣ ತೀರಿಸುವಿಕೆ: ಉಪಾಕರ್ಮ ಆಚರಣೆಯಿಂದ ಮನುಷ್ಯನು ತನಗೆ ಅರಿವಿಲ್ಲದೇ ಮಾಡಿದ ಪಾಪಗಳಿಂದ ಮುಕ್ತಿ ಪಡೆದು ಪರಮಾತ್ಮನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ದೇವ ಹಾಗೂ ಪಿತೃ ಋಣ ತೀರಿಸಲು ತರ್ಪಣ ನೀಡುವುದು ಈ ಧಾರ್ಮಿಕ ಚಟುವಟಿಕೆಯ ಮುಖ್ಯ ಉದ್ದೇಶ.
ಧರ್ಮದ ಶಕ್ತಿ: ಸಾವಿರಾರು ವರ್ಷಗಳ ಹಿಂದೆಯೇ ಸಂವತ್ಸರಗಳ ಹಬ್ಬಗಳಿಗೆ ಪಂಚಾಂಗ ನಿರ್ಣಯಿಸಿ ಮುಹೂರ್ತ ಆಚರಿಸುವ ಕ್ರಮ ರೂಪಿಸಿರುವುದು ಸನಾತನ ಧರ್ಮದ ಶಕ್ತಿಗೆ ನಿದರ್ಶನವಾಗಿದೆ. ಪ್ರತಿಯೊಬ್ಬರೂ ನಿತ್ಯ ಸಂಧ್ಯಾವಂದನೆ ಹಾಗೂ ಗಾಯತ್ರಿ ಉಪಾಸನೆ ಮಾಡುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಚಕ್ರಪಾಣಿ, ಗಿರೀಶ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



