ಯಶವಂತಪುರದಲ್ಲಿ ಹೈಟೆಕ್ ಟೆಕ್ಸ್ಟೈಲ್ ಮಾರ್ಕೆಟ್; ಶೀಘ್ರವೇ ಶಂಕುಸ್ಥಾಪನೆ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಪಾರಂಪರಿಕ ಕೈಮಗ್ಗ ಕಲೆ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಯಶವಂತಪುರದಲ್ಲಿ ಸುಸಜ್ಜಿತ ಟೆಕ್ಸ್ಟೈಲ್ ಮಾರ್ಕೆಟ್ ನಿರ್ಮಿಸಲಾಗುವುದು ಎಂದು ಜವಳಿ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಅವರು ಭರವಸೆ ನೀಡಿದರು.
ರಾಜಾಜಿನಗರದ ಡಾ. ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿರುವ 14 ದಿನಗಳ **’ಭಾರತೀಯ ಕೈಮಗ್ಗ ಪರಂಪರೆ ಪ್ರದರ್ಶನ’**ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಶವಂತಪುರದಲ್ಲಿ ಮಾರುಕಟ್ಟೆ ಸಂಕೀರ್ಣ: ಇಲಾಖೆಯ ವಶದಲ್ಲಿರುವ ಯಶವಂತಪುರದ ಒಂದೂವರೆ ಎಕರೆ ಜಾಗದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು. ಇಲ್ಲಿ ಕೈಮಗ್ಗ ಉತ್ಪನ್ನಗಳ ಜೊತೆಗೆ ಚನ್ನಪಟ್ಟಣದ ಗೊಂಬೆಗಳು, ಕುಂಬಾರಿಕೆ ಸೇರಿದಂತೆ ಎಲ್ಲಾ ಪಾರಂಪರಿಕ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಸ್ಥಳೀಯ ಬ್ರ್ಯಾಂಡ್ಗಳಿಗೆ ಒತ್ತು: ರಾಜ್ಯದ ಕೈಮಗ್ಗ ಉತ್ಪನ್ನಗಳು ಬೇರೆ ರಾಜ್ಯಗಳಲ್ಲಿ ವಿವಿಧ ಬ್ರ್ಯಾಂಡ್ಗಳ ಹೆಸರಿನಲ್ಲಿ ಮಾರಾಟವಾಗುತ್ತಿವೆ. ನಮ್ಮಲ್ಲೇ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ನೇಕಾರರಿಗೆ ನೇರ ಲಾಭ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನೂತನ ಜವಳಿ ನೀತಿ 2026-30: ರಾಜ್ಯದ 2026-30ರ ಅವಧಿಯ ನೂತನ ಜವಳಿ ನೀತಿ ಅಂತಿಮ ಹಂತದಲ್ಲಿದೆ. ಸಣ್ಣ ಮತ್ತು ಬೃಹತ್ ಕೈಗಾರಿಕೆಗಳನ್ನು ಒಂದೇ ಸೂರಿನಡಿ ತರುವುದು ಇದರ ಮುಖ್ಯ ಉದ್ದೇಶವಾಗಿದೆ.
ಪಿಎಂ ಮಿತ್ರ ಪಾರ್ಕ್: ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ‘ಪಿಎಂ ಮಿತ್ರ’ ಪಾರ್ಕ್ ನೂಲಿನಿಂದ ಬಟ್ಟೆ ತಯಾರಿಕೆಯವರೆಗೆ ಎಲ್ಲಾ ಚಟುವಟಿಕೆಗಳನ್ನು ಒಳಗೊಂಡಿರಲಿದ್ದು, ಇದು ರಾಜ್ಯದ ಜವಳಿ ಕ್ಷೇತ್ರದಲ್ಲಿ ಮೈಲಿಗಲ್ಲಾಗಲಿದೆ.
ಈ ಮೇಳದಲ್ಲಿ ಒಟ್ಟು 80 ಮಳಿಗೆಗಳಿದ್ದು, ಕರ್ನಾಟಕ ಮಾತ್ರವಲ್ಲದೆ ಕಾಶ್ಮೀರ, ಹರಿಯಾಣ ಹಾಗೂ ರಾಜಸ್ಥಾನದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ಉದ್ಘಾಟನೆಯ ನಂತರ ಸಚಿವರು ಮಳಿಗೆಗಳಿಗೆ ಭೇಟಿ ನೀಡಿ, ಕೈಮಗ್ಗದಲ್ಲಿ ನೇಯಲಾದ ಡಾ. ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಗಳನ್ನು ವೀಕ್ಷಿಸಿ ನೇಕಾರರ ಕೌಶಲ್ಯವನ್ನು ಶ್ಲಾಘಿಸಿದರು.
ಕಾವೇರಿ ಹ್ಯಾಂಡ್ಲೂಮ್ ಅಧ್ಯಕ್ಷ ಬಿ.ಜೆ. ಗಣೇಶ್ ಅವರು ಪಾರಂಪರಿಕ ಉತ್ಪನ್ನಗಳಿಗೆ ಏಕಗವಾಕ್ಷಿ ಮಾರುಕಟ್ಟೆ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಜವಳಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಪ್ರಭಾ ಕರಣ್, ಪ್ರಕಾಶ್ ಮತ್ತು ಯೋಗೇಶ್ ಉಪಸ್ಥಿತರಿದ್ದರು.



