ಪ್ರಿಯಕರನ ಜೊತೆ ಸೇರಿ ಪತಿಗೆ ಹಾವು ಕಚ್ಚಿಸಿ ಕೊಲೆ: ಸಹಜ ಸಾವು ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದ ಪಾಪಿ ಪತ್ನಿ ಸೇರಿ ನಾಲ್ವರ ಬಂಧನ

ಮೀರತ್ (ಉತ್ತರ ಪ್ರದೇಶ): ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ವಿಷಪೂರಿತ ಹಾವಿನಿಂದ ಕಚ್ಚಿಸಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಸ್ತಿನಾಪುರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮೃತರನ್ನು ಅತುಲ್ ಪವಾರ್ ಎಂದು ಗುರುತಿಸಲಾಗಿದೆ. ಆರಂಭದಲ್ಲಿ ಅತುಲ್ ಪವಾರ್ ಅವರು ಹಾವು ಕಚ್ಚಿದ ಪರಿಣಾಮವಾಗಿ ಸಹಜ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಕುಟುಂಬಸ್ಥರು ಹಾಗೂ ಸ್ಥಳೀಯರು ಸಹ ಇದನ್ನು ಆಕಸ್ಮಿಕ ಘಟನೆ ಎಂದೇ ನಂಬಿದ್ದರು. ಆದರೆ, ಅತುಲ್ ಸಾವಿನ ಸುತ್ತ ಕೆಲವು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮೀರತ್ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸವಿಸ್ತಾರ ತನಿಖೆ ಕೈಗೊಂಡಾಗ ಇಡೀ ಜಗತ್ತೇ ಬೆಚ್ಚಿಬೀಳುವಂತಹ ಸತ್ಯ ಹೊರಬಂದಿದೆ.
ಪೊಲೀಸರು ನಡೆಸಿದ ತಾಂತ್ರಿಕ ಹಾಗೂ ತೀವ್ರ ವಿಚಾರಣೆಯ ವೇಳೆ, ಅತುಲ್ ಪವಾರ್ ಅವರ ಪತ್ನಿಯೇ ಈ ಇಡೀ ಕೊಲೆ ಸಂಚಿನ ಸೂತ್ರಧಾರಿ ಎಂಬುದು ಪತ್ತೆಯಾಗಿದೆ. ಈಕೆ ತನ್ನ ಪ್ರಿಯಕರ ಹಾಗೂ ಇತರ ಇಬ್ಬರು ಸಹಚರರ ಸಹಾಯದೊಂದಿಗೆ, ಯೋಜಿತವಾಗಿಯೇ ಪತಿಗೆ ತೀವ್ರ ವಿಷಪೂರಿತ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವುದು ಸಾಬೀತಾಗಿದೆ. ಕೊಲೆಯನ್ನು ಆಕಸ್ಮಿಕ ಹಾವಿನ ಕಡಿತ ಎಂದು ಬಿಂಬಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚಲು ಆರೋಪಿಗಳು ಸ್ಕೆಚ್ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೋಮಾಂಚಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಸ್ತಿನಾಪುರ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ, ಮೃತರ ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಘಟನೆಗೆ ಬಳಸಲಾದ ವಿಷಪೂರಿತ ಹಾವು ಮತ್ತು ಇತರ ಸಾಕ್ಷ್ಯಗಳ ಪತ್ತೆಗಾಗಿ ಪೊಲೀಸರು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಪತಿಯನ್ನೇ ಹಾವಿನಿಂದ ಕಚ್ಚಿಸಿ ಕೊಂದ ಈ ಭೀಕರ ಘಟನೆ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶವನ್ನು ಉಂಟುಮಾಡಿದ್ದು, ಆರೋಪಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



