ಕಾರವಾರ: ಹುತಾತ್ಮ ವೀರ ಯೋಧ ವಿನೋದ ನಾಯ್ಕ 21ನೇ ಪುಣ್ಯಸ್ಮರಣೆ – ನೂತನ ಕಾಂಪೌಂಡ್ ಗೋಡೆ ಉದ್ಘಾಟಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ

ಕಾರವಾರ:
ದೇಶದ ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಡುತ್ತಾ ವೀರ ಮರಣವನ್ನಪ್ಪಿದ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ್ ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿ ಕಾರ್ಯಕ್ರಮ ನೆರವೇರಿತು. ಇದೇ ವೇಳೆ ಅವರ ಸ್ಮಾರಕಕ್ಕೆ ನೂತನವಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆ ಹಾಗೂ ಗೇಟನ್ನು ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿದರು.
ಗೌರವ ನಮನ ಹಾಗೂ ಗಿಡ ನೆಡುವ ಕಾರ್ಯಕ್ರಮ:
ಕಾರ್ಯಕ್ರಮದಲ್ಲಿ ರೂಪಾಲಿ ನಾಯ್ಕ ಮಾತನಾಡಿ, “ಏಕೈಕ ಮಗನಾಗಿದ್ದರೂ ದೇಶಕ್ಕಾಗಿ ಅಮೂಲ್ಯ ರತ್ನವನ್ನು ನೀಡಿದ ತಂದೆ ಮಹಾದೇವ ನಾಯ್ಕ ಅವರಿಗೆ ಪಾದನಮಸ್ಕಾರ ಸಲ್ಲಿಸುತ್ತೇನೆ. ವಿನೋದ ನಾಯ್ಕ ಅವರ ಬಲಿದಾನ ಎಂದಿಗೂ ಅಮರ” ಎಂದರು.
ಮಾಜಿ ಗ್ರಾ.ಪಂ. ಅಧ್ಯಕ್ಷ ಆನಂದು ನಾಯ್ಕ ಹಾಗೂ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಯೋಧನ ಶೌರ್ಯವನ್ನು ಸ್ಮರಿಸಿದರು. ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಸ್ಮಾರಕದ ಆವರಣದಲ್ಲಿ ತೆಂಗಿನ ಸಸಿ ಮತ್ತು ಹೂವಿನ ಗಿಡಗಳನ್ನು ನೆಡಲಾಯಿತು.
ಬಲಿದಾನದ ನೆನಪು:
ಮಹಾದೇವ ಡಿ. ನಾಯ್ಕ ಹಾಗೂ ಗೀತಾ ಎಮ್. ನಾಯ್ಕ ದಂಪತಿಯ ಏಕೈಕ ಪುತ್ರರಾಗಿದ್ದ ವಿನೋದ ನಾಯ್ಕ ಅವರು 2005 ರ ಆಗಸ್ಟ್ 18 ರಂದು (ರಕ್ಷಾ ಬಂಧನದ ದಿನ) ಜಮ್ಮು ಕಶ್ಮೀರದ ಪೂಂಚ್ ಗಡಿಯಲ್ಲಿ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದರು.
ಯೋಧನ ಸ್ಮರಣಾರ್ಥ ತಂದೆ-ತಾಯಿ ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದಲ್ಲಿ ನಿರ್ಮಿಸಿದ್ದ ನೂತನ ಬಸ್ ತಂಗುದಾಣವನ್ನು ಕಳೆದ ಆಗಸ್ಟ್ 15 ರಂದು ಗ್ರಾ.ಪಂ.ಗೆ ಹಸ್ತಾಂತರಿಸಿ ಮಾದರಿಯಾಗಿದ್ದರು. ಇದೀಗ ಸ್ಮಾರಕದ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು ಸ್ವಂತ ಧನಸಹಾಯ ನೀಡಿದ್ದು, ಹುತಾತ್ಮ ಯೋಧನ ತಂದೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ. ಸದಸ್ಯರಾದ ಕಿಶೋರ ಕಡವಾಡಕರ, ದೇವಿದಾಸ ತಳೇಕರ, ನಿವೃತ್ತ ಸೈನಿಕರು ಹಾಗೂ ಕಡವಾಡ ಗ್ರಾಮದ ನೂರಾರು ನಾಗರಿಕರು ಉಪಸ್ಥಿತರಿದ್ದರು.





