ಲಕ್ಕುಂಡಿ ನಿಧಿ ರಹಸ್ಯ: 600 ವರ್ಷ ಹಳೆಯ ವಿಜಯನಗರ ಕಾಲದ ಆಭರಣಗಳೇ ಇವು?

ಗದಗದ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಪತ್ತೆಯಾದ ಚಿನ್ನದ ಆಭರಣಗಳು ಕೇವಲ ಸಂಪತ್ತಲ್ಲ, ಅವು ಶತಮಾನಗಳ ಹಿಂದಿನ ಇತಿಹಾಸದ ಕುರುಹುಗಳು ಎಂದು ತಜ್ಞರ ಸಮಿತಿ ಸ್ಪಷ್ಟಪಡಿಸಿದೆ. ಸುಮಾರು 500 ರಿಂದ 600 ವರ್ಷಗಳ ಹಳೆಯದಾದ ಈ ಆಭರಣಗಳು ವಿಜಯನಗರ ಸಾಮ್ರಾಜ್ಯದ ವೈಭವದ ಕಾಲಕ್ಕೆ ಸೇರಿದವುಗಳಿರಬಹುದು ಎಂದು ಅಂದಾಜಿಸಲಾಗಿದೆ.
ಪತ್ತೆಯಾದ ಆಭರಣಗಳಲ್ಲಿ ‘ಕೀರ್ತಿಮುಖ’ ಮತ್ತು ‘ಸಿಂಹ’ದಂತಹ ವಿನ್ಯಾಸಗಳಿದ್ದು, ಇವು ಅಂದಿನ ಕಾಲದ ದೇವತಾ ವಿಗ್ರಹಗಳಿಗೆ ತೊಡಿಸುತ್ತಿದ್ದ ಆಭರಣಗಳಿರಬಹುದು ಎಂದು ಇತಿಹಾಸ ತಜ್ಞ ಡಾ. ಎಂ.ಎಸ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಚಿನ್ನದ ಒಡವೆಗಳಲ್ಲಿ ಪಚ್ಚೆ, ನೀಲಮಣಿ ಮತ್ತು ಹವಳದಂತಹ ಬೆಲೆಬಾಳುವ ಹರಳುಗಳನ್ನು ಅತ್ಯಂತ ನಯವಾಗಿ ಕೆತ್ತಲಾಗಿದೆ.
ಆಕ್ರಮಣಗಳ ಭೀತಿಯಿಂದ ಅಂದಿನ ಕಾಲದ ಜನರು ತಮ್ಮ ಅಮೂಲ್ಯ ಆಭರಣಗಳನ್ನು ಭೂಮಿಯಲ್ಲಿ ಹೂತಿಟ್ಟಿರಬಹುದು ಎಂಬುದು ತಜ್ಞರ ಅಭಿಪ್ರಾಯ.
ಪ್ರಸ್ತುತ ಈ ಎಲ್ಲಾ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಲಾಗಿದ್ದು, ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಸಾರುವಲ್ಲಿ ಈ ಪತ್ತೆ ಪ್ರಮುಖ ಪಾತ್ರ ವಹಿಸಲಿದೆ. ಈ ಸಂಶೋಧನೆಯಿಂದಾಗಿ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಪುರಾತನ ಅವಶೇಷಗಳು ದೊರೆಯುವ ಸಾಧ್ಯತೆಗಳಿವೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಗದಗ ಜಿಲ್ಲೆಯ ಲಕ್ಕುಂಡಿ (Lakkundi) ಕೇವಲ ಒಂದು ಹಳ್ಳಿಯಲ್ಲ, ಅದು ಕರ್ನಾಟಕದ ವಾಸ್ತುಶಿಲ್ಪದ ಭವ್ಯ ಇತಿಹಾಸವನ್ನು ಸಾರುವ ಒಂದು ತೆರೆದ ಮ್ಯೂಸಿಯಂ. ಇತ್ತೀಚೆಗೆ ಪತ್ತೆಯಾದ ಚಿನ್ನದ ನಿಧಿ ಈ ಗ್ರಾಮದ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಎತ್ತಿ ಹಿಡಿದಿದೆ.
ಲಕ್ಕುಂಡಿಯು ಅಂದಿನ ಕಾಲದ ಪ್ರಮುಖ ‘ಟಂಕಸಾಲೆ’ ಆಗಿತ್ತು. ಇಲ್ಲಿ ‘ಲೋಕ್ಕಿ ಗದ್ಯಾಣ’ ಎಂಬ ಚಿನ್ನದ ನಾಣ್ಯಗಳನ್ನು ಮುದ್ರಿಸಲಾಗುತ್ತಿತ್ತು. ಈಗ ಚಿನ್ನದ ಆಭರಣಗಳು ಪತ್ತೆಯಾಗಿರುವುದು ಈ ಇತಿಹಾಸಕ್ಕೆ ಪೂರಕವಾಗಿದೆ.
ಇಲ್ಲಿ ಸುಮಾರು 50ಕ್ಕೂ ಹೆಚ್ಚು ಪುರಾತನ ದೇವಸ್ಥಾನಗಳು ಮತ್ತು 100ಕ್ಕೂ ಹೆಚ್ಚು ಬಾವಿಗಳಿವೆ (ಕಲ್ಯಾಣಿಗಳು). ಕಾಶಿವಿಶ್ವನಾಥ ದೇವಸ್ಥಾನ, ಬ್ರಹ್ಮ ಜಿನಾಲಯ ಇಲ್ಲಿನ ಪ್ರಮುಖ ಆಕರ್ಷಣೆಗಳು.
ವರದಿ :-ಆಂಟೋನಿ ಪತ್ರಕರ್ತ



