ಗಂಧನಹಳ್ಳಿ: ಕುಡುಕರ ಅಡ್ಡೆಯಾದ ಸರ್ಕಾರಿ ಶಾಲೆ; ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಕೆ.ಆರ್. ನಗರ: ತಾಲ್ಲೂಕಿನ ಗಂಧನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಕುಡುಕರ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಶಾಲೆಯ ಪಾವಿತ್ರ್ಯತೆಗೆ ಧಕ್ಕೆ ಉಂಟಾಗಿದೆ.
ಗ್ರಾಮದ ಮಕ್ಕಳ ಜ್ಞಾನಾರ್ಜನೆಯ ಕೇಂದ್ರವಾಗಬೇಕಿದ್ದ ಈ ಸರ್ಕಾರಿ ಶಾಲೆಯ ಆವರಣವನ್ನು ಮದ್ಯವ್ಯಸನಿಗಳು ತಮ್ಮ ಅಡ್ಡವಾಗಿಸಿಕೊಂಡಿದ್ದಾರೆ. ಶಾಲಾ ಅವಧಿ ಮುಗಿಯುತ್ತಿದ್ದಂತೆ ಇಲ್ಲಿ ಕುಳಿತು ಮದ್ಯಪಾನ ಮಾಡುವ ಕಿಡಿಗೇಡಿಗಳು, ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಎಸೆದು ಅಸಭ್ಯವಾಗಿ ವರ್ತಿಸುತ್ತಿದ್ದಾರೆ.
ಮರುದಿನ ಬೆಳಗ್ಗೆ ಶಾಲೆಗೆ ಬರುವ ಪುಟ್ಟ ಮಕ್ಕಳು ಮತ್ತು ಶಿಕ್ಷಕರು ಶಾಲೆಯ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮದ್ಯದ ಬಾಟಲಿಗಳು ಮತ್ತು ತಿಂಡಿಯ ಪೊಟ್ಟಣಗಳನ್ನು ನೋಡಿ ಮುಜುಗರ ಅನುಭವಿಸುವಂತಾಗಿದೆ. ಶಾಲೆಯ ಆವರಣವು ಗಬ್ಬು ನಾರುತ್ತಿರುವುದು ಶೈಕ್ಷಣಿಕ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಶಾಲೆಯ ಆವರಣದಲ್ಲಿ ಅಕ್ರಮವಾಗಿ ಪ್ರವೇಶಿಸಿ ಇಂತಹ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ರಾತ್ರಿ ವೇಳೆ ಈ ಭಾಗದಲ್ಲಿ ಪೊಲೀಸರು ಗಸ್ತು ತಿರುಗುವ ಮೂಲಕ ಕಿಡಿಗೇಡಿಗಳಿಗೆ ಬ್ರೇಕ್ ಹಾಕಬೇಕು ಮತ್ತು ಶಾಲೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂಬುದು ಗಂಧನಹಳ್ಳಿ ಗ್ರಾಮಸ್ಥರ ಪ್ರಬಲ ಆಗ್ರಹವಾಗಿದೆ.



