ಬೆಂಗಳೂರು: ಗ್ಯಾಸ್ ದರ ಏರಿಕೆ ಕಿರಿಕ್; ಬಾಡಿಗೆದಾರರ ಮೇಲೆ ಮನೆ ಮಾಲೀಕರಿಂದ ಚಾಕು, ಬ್ಲೇಡ್ನಿಂದ ಭೀಕರ ಹಲ್ಲೆ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆದಾರರು ಮತ್ತು ಮಾಲೀಕರ ನಡುವಿನ ಜಗಳ ವಿಕೋಪಕ್ಕೆ ಹೋಗಿ ರಕ್ತಪಾತದಲ್ಲಿ ಅಂತ್ಯವಾಗಿರುವ ಘಟನೆ ಜೀವನಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಹಳ್ಳಿಯಲ್ಲಿ ನಡೆದಿದೆ. ಗ್ಯಾಸ್ ದರ ಹಾಗೂ ನೀರಿನ ಬಿಲ್ ವಿಚಾರವಾಗಿ ನಡೆದ ಕ್ಷುಲ್ಲಕ ಗಲಾಟೆಯಲ್ಲಿ ಮನೆ ಮಾಲೀಕರು ಬಾಡಿಗೆದಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಬಾಡಿಗೆದಾರರಾದ ನರೇಶ್, ಅವರ ತಮ್ಮ ಸಚಿನ್ ಮತ್ತು ಸಹೋದರಿ ರೇಖಾ ಅವರು ಕಳೆದ ಒಂದು ವಾರದ ಹಿಂದೆಯಷ್ಟೇ ಕೋಡಿಹಳ್ಳಿಯ ಮನೆಯೊಂದಕ್ಕೆ 8 ಸಾವಿರ ರೂಪಾಯಿ ಬಾಡಿಗೆಗೆ ಬಂದಿದ್ದರು. ಆದರೆ ಮನೆಗೆ ಬಂದ ಕೇವಲ ಮೂರೇ ದಿನಕ್ಕೆ ಮಾಲೀಕರಾದ ಶೋಭಾ ಮತ್ತು ದೇವರಾಜ್, “ಗ್ಯಾಸ್ ದರ ಏರಿಕೆಯಾಗಿದೆ ಹಾಗೂ ನೀರಿನ ಬಿಲ್ ಹೆಚ್ಚು ನೀಡಬೇಕು, ಇಲ್ಲದಿದ್ದರೆ ತಕ್ಷಣ ಮನೆ ಖಾಲಿ ಮಾಡಿ” ಎಂದು ಕಿರಿಕ್ ಶುರು ಮಾಡಿದ್ದಾರೆ. ಇದೇ ವಿಚಾರವಾಗಿ ಮಾರ್ಚ್ 29ರಂದು ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದಾಗ, ಮಾಲೀಕರು ಹಾಗೂ ಅವರ ಮಕ್ಕಳು ಸೇರಿ ನರೇಶ್ ಕುಟುಂಬದ ಮೇಲೆ ಮುಗಿಬಿದ್ದಿದ್ದಾರೆ. ಈ ವೇಳೆ ಚಾಕು ಮತ್ತು ಬ್ಲೇಡ್ಗಳನ್ನು ಬಳಸಿ ನರೇಶ್ ಅವರ ಮುಖ ಹಾಗೂ ತಲೆಗೆ ಮನಬಂದಂತೆ ಇರಿಯಲಾಗಿದೆ. ಹಲ್ಲೆಯ ರಭಸಕ್ಕೆ ನರೇಶ್ ಸಹೋದರಿ ರೇಖಾ ಪ್ರಜ್ಞೆ ತಪ್ಪಿ ಬಿದ್ದಾಗ, ಆಕೆಯ ಮೇಲೆ ನೀರು ಸುರಿದು ಮಾಲೀಕರು ವಿಕೃತಿ ಮೆರೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕುಟುಂಬದವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜೀವನಭೀಮಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೊಂದೆಡೆ, ಮನೆ ಮಾಲೀಕರು ಕೂಡ ಬಾಡಿಗೆದಾರರ ಮೇಲೆ ಪ್ರತಿ ಆರೋಪ ಮಾಡಿದ್ದು, “ಮನೆ ಖಾಲಿ ಮಾಡಲು ಹೇಳಿದ್ದಕ್ಕೆ ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದಾರೆ” ಎಂದು ದೂರು ನೀಡಿದ್ದಾರೆ.
ಜೀವನಭೀಮಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಣ್ಣ ವಿಚಾರಕ್ಕೆ ಇಷ್ಟೊಂದು ಭೀಕರವಾಗಿ ಹಲ್ಲೆ ನಡೆಸಿದವರ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.



