ಹುಬ್ಬಳ್ಳಿ: ಲವ್ ಜಿಹಾದ್ಗಾಗಿ ಗಾಂಜಾ ಬಳಕೆ ಆರೋಪ – ಆರೋಪಿ ಸಮೀರ್ ಬಂಧನಕ್ಕೆ ಹಿಂದೂ ಪರ ಸಂಘಟನೆಗಳ ಆಗ್ರಹ

ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಮತ್ತು ಅಕ್ರಮ ಗಾಂಜಾ ಮಾರಾಟದ ಗಂಭೀರ ಆರೋಪ ಕೇಳಿಬಂದಿದ್ದು, ಆರೋಪಿ ಸಮೀರ್ ಬೂದಿಹಾಳ ಎಂಬಾತನ ಬಂಧನಕ್ಕೆ ಆಗ್ರಹಿಸಿ ಅಶೋಕನಗರ ಪೊಲೀಸ್ ಠಾಣೆಯ ಎದುರು ಬಜರಂಗದಳ ಹಾಗೂ ಹಿಂದೂ ಕಾರ್ಯಕರ್ತರು ತಡರಾತ್ರಿವರೆಗೆ ಬೃಹತ್ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯ ರಾಜನಗರದ ನಿವಾಸಿ ಸಮೀರ್ ಬೂದಿಹಾಳ ಎಂಬಾತ ಕಾರಿನಲ್ಲಿ ಕುಳಿತು ಪ್ಲಾಸ್ಟಿಕ್ ಕವರ್ನಿಂದ ಗಾಂಜಾ ಹೊರತೆಗೆಯುತ್ತಿರುವ ವಿಡಿಯೋವೊಂದು ಪೊಲೀಸ್ ಸಿಬ್ಬಂದಿ ರಾಜೇಂದ್ರ ಅವರಿಗೆ ವಾಟ್ಸ್ಆ್ಯಪ್ ಮೂಲಕ ತಲುಪಿತ್ತು. ಕರ್ತವ್ಯದಲ್ಲಿದ್ದ ಪೊಲೀಸರು ವಿಡಿಯೋ ಪರಿಶೀಲಿಸಿದಾಗ, ಆರೋಪಿ ಸಮೀರ್ ಅಕ್ರಮವಾಗಿ ಮಾದಕ ವಸ್ತುಗಳನ್ನು ಹೊಂದಿರುವ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸಮೀರ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. “ಸಮೀರ್ ಕೇವಲ ಗಾಂಜಾ ಮಾರಾಟಗಾರನಲ್ಲ, ಬದಲಿಗೆ ಹಿಂದೂ ಯುವತಿಯರಿಗೆ ಮಾದಕ ವಸ್ತುಗಳನ್ನು ನೀಡಿ ಅವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕಿಂಗ್ ಪಿನ್” ಎಂದು ಕಿಡಿಕಾರಿದ್ದಾರೆ. ಆರೋಪಿಯ ಮೊಬೈಲ್ನಲ್ಲಿ ಯುವತಿಯರ ಮೇಲೆ ನಡೆಸಲಾದ ದೌರ್ಜನ್ಯದ ವಿಡಿಯೋ ಹಾಗೂ ಫೋಟೋಗಳಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಶುಕ್ರವಾರ ತಡರಾತ್ರಿವರೆಗೂ ನಡೆದ ಪ್ರತಿಭಟನೆಯಲ್ಲಿ, “ಲವ್ ಜಿಹಾದ್ ಕೃತ್ಯಕ್ಕಾಗಿ ಗಾಂಜಾವನ್ನು ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇಂತಹ ಜಾಲದ ಹಿಂದೆ ದೊಡ್ಡ ತಂಡವೇ ಇರುವ ಸಾಧ್ಯತೆಯಿದೆ. ಕೂಡಲೇ ಸಮೀರ್ನನ್ನು ಬಂಧಿಸಿ ಆತನ ಮೊಬೈಲ್ ಮತ್ತು ಸಂಪರ್ಕಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು” ಎಂದು ಹಿಂದೂ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಸದ್ಯ ಹುಬ್ಬಳ್ಳಿಯಲ್ಲಿ ಗಾಂಜಾ ಜಾಲದ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲೂ ಒತ್ತಾಯ ಕೇಳಿಬರುತ್ತಿದೆ.



