ಕೌಟುಂಬಿಕ ಕಲಹಕ್ಕೆ ಬೆಚ್ಚಿಬಿದ್ದ ಚಿಂತಾಮಣಿ: ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿ ಪತ್ನಿಯ ಆತ್ಮಹತ್ಯೆ ನಾಟಕ!

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ, ಪತ್ನಿಯೊಬ್ಬಳು ಮಲಗಿದ್ದ ಪತಿಯ ಮರ್ಮಾಂಗಕ್ಕೆ ಒದ್ದು ಕೊಲೆಗೆ ಯತ್ನಿಸಿದ ಘಟನೆ ರವಿವಾರ ವರದಿಯಾಗಿದೆ. ಘಟನೆಯ ಬಳಿಕ ಪತ್ನಿ ಕೂಡ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದು, ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದೆ.
ಪತಿ ಮುನೀಂದ್ರ ಹಾಗೂ ಪತ್ನಿ ವರ್ಷಾ ನಡುವೆ ಕಳೆದ ಕೆಲವು ಸಮಯದಿಂದ ಸಂಸಾರಿಕ ಕಲಹ ಏರ್ಪಟ್ಟಿತ್ತು. ಇತ್ತೀಚೆಗೆ ಇವರಿಬ್ಬರ ನಡುವೆ ವಿಚ್ಛೇದನ (ಡೈವೋರ್ಸ್) ಪಡೆಯುವ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ವರ್ಷಾ ಸಾರ್ವಜನಿಕವಾಗಿ ರಂಪಾಟ ನಡೆಸಿ ಪತಿಗೆ ಎಚ್ಚರಿಕೆ ನೀಡಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರ ಮಧ್ಯರಾತ್ರಿ ಪತಿ ಮುನೀಂದ್ರ ಮಲಗಿದ್ದ ವೇಳೆ, ಸಿಟ್ಟಿನಲ್ಲಿದ್ದ ವರ್ಷಾ ಆತನ ಖಾಸಗಿ ಭಾಗಕ್ಕೆ (ಮರ್ಮಾಂಗಕ್ಕೆ) ಬಲವಾಗಿ ಒದ್ದು ಗಂಭೀರವಾಗಿ ಗಾಯಗೊಳಿಸಿದ್ದಾಳೆ. ಪತಿಯ ಚೀರಾಟ ಕೇಳಿ ಮನೆಯವರು ಧಾವಿಸುವಷ್ಟರಲ್ಲಿ ಆತ ಅರೆಪ್ರಜ್ಞಾವಸ್ಥೆಗೆ ಜಾರಿದ್ದ ಎನ್ನಲಾಗಿದೆ. ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪತಿಗೆ ಗಂಭೀರ ಗಾಯ ಮಾಡಿ ಸಿಕ್ಕಿಬೀಳುವ ಭೀತಿಯಿಂದ ವರ್ಷಾ ತಾನು ಕೂಡ ಆತ್ಮಹತ್ಯೆಗೆ ಯತ್ನಿಸುವ ನಾಟಕವಾಡಿದ್ದಾಳೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಟುಂಬದ ಸದಸ್ಯರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಸಂಸಾರಿಕ ಜಗಳ ಇಷ್ಟೊಂದು ಕ್ರೂರ ರೂಪ ತಾಳಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸದ್ಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಪ್ರಕ್ರಿಯೆ ನಡೆಯುತ್ತಿದೆ.



