ಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುರಾಜಕೀಯರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ದಲಿತರು ಹಾಗೂ ಶೋಷಿತರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮಕ್ಕೆ ಆಗ್ರಹ – ಚಂದ್ರಶೇಖರ್ ಪರಶುರಾಮ್ ಗದಗಕರ ಎಚ್ಚರಿಕೆ

Share News

ಬ್ಯಾಡಗಿ : ರಾಜ್ಯಾದ್ಯಂತ ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ ಮತ್ತು ಸಾಮಾಜಿಕ ಬಹಿಷ್ಕಾರದಂತಹ ದೌರ್ಜನ್ಯ ಪ್ರಕರಣಗಳು ಸತತವಾಗಿ ನಡೆಯುತ್ತಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದು ತೀವ್ರ ಖಂಡನೀಯ ಎಂದು ಭೀಮರಾಜ್ಯ ದಲಿತ್ ಸೇವಾ ಸಮಿತಿಯ ಹಾವೇರಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಪರಶುರಾಮ್ ಗದಗಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸಾಲು ಸಾಲು ಘಟನೆಗಳನ್ನು ಉಲ್ಲೇಖಿಸಿ ಕಳವಳ ವ್ಯಕ್ತಪಡಿಸಿದ್ದಾರೆ:

​ರಾಜ್ಯದಲ್ಲಿ ನಡೆದ ದೌರ್ಜನ್ಯ ಘಟನೆಗಳ ವಿವರ:

​ಬಾಗಲಕೋಟೆ (ಉಗಲವಾಟ): ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದಲಿತ ಯುವಕನ ಮೇಲೆ ಹಲ್ಲೆ.

​ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರ: ಕಳವು ಶಂಕೆಯ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ದೈಹಿಕ ಥಳಿತ.

​ರಾಯಚೂರು: ಬಿಎಸ್‌ಪಿ ಮುಖಂಡ ಭೂಮಾನಂದ ಅವರ ಭೀಕರ ಹತ್ಯೆ ಹಾಗೂ ಅಪ್ರಾಪ್ತ ಬಾಲಕಿ ಅಶ್ವಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ.

​ವಿಜಯಪುರ (ಚಬನೂರು ಮತ್ತು ಗುಂಡಕನಾಳ): ಯುವಕರ ಮೇಲೆ ನಡೆದ ಮಾರಣಾಂತಿಕ ದಾಳಿಗಳು.

​ಧಾರವಾಡ (ಕುಂಬಾರಕೊಪ್ಪ): ಏಳು ಕುಟುಂಬಗಳಿಗೆ ವಿಧಿಸಲಾಗಿರುವ ಅಮಾನವೀಯ ಸಾಮಾಜಿಕ ಬಹಿಷ್ಕಾರ.

​ಯಾದಗಿರಿ (ಕಿಲ್ಲನಕೇರಾ): ಭಜಂತ್ರಿ ಸಮುದಾಯದ ಜನರಿಗೆ ಊರು ಬಿಟ್ಟು ತೊಲಗುವಂತೆ ಹಾಕಲಾಗಿರುವ ಬೆದರಿಕೆ.

​ಪ್ರಮುಖ ಬೇಡಿಕೆಗಳು:

ದಲಿತ ಹಾಗೂ ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರ ತಕ್ಷಣವೇ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಪ್ರಕರಣಗಳ ಆರೋಪಿಗಳನ್ನು ಬಂಧಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್ಟಿ) ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.

​ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಭದ್ರತೆ, ತಕ್ಷಣದ ಪರಿಹಾರ ಧನ ಹಾಗೂ ನ್ಯಾಯ ಒದಗಿಸಬೇಕು. ಇಂತಹ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾಮಾಜಿಕ ಬಹಿಷ್ಕಾರಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಬೇಕು ಎಂದು ಗದಗಕರ ಒತ್ತಾಯಿಸಿದ್ದಾರೆ.

​ಬೃಹತ್ ಹೋರಾಟದ ಎಚ್ಚರಿಕೆ:

ಸರ್ಕಾರ ಶೋಷಿತ ಸಮುದಾಯಗಳ ರಕ್ಷಣೆಗೆ ಧಾವಿಸದಿದ್ದರೆ ಮತ್ತು ಈ ಬೇಡಿಕೆಗಳನ್ನು ತಕ್ಷಣ ಈಡೇರಿಸದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಚಂದ್ರಶೇಖರ್ ಪರಶುರಾಮ್ ಗದಗಕರ ಎಚ್ಚರಿಸಿದ್ದಾರೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!