ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸನ್ಮಾನ

ನವದೆಹಲಿ: 2026ರ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದ ಮಹಿಳೆಯರ ಶಾಟ್ಪುಟ್ F-57 ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಮೈಸೂರು ಮೂಲದ ಪ್ಯಾರಾ ಅಥ್ಲೀಟ್, ಹೆಮ್ಮೆಯ ಕನ್ನಡತಿ ಶಿಲ್ಪಾ ಕೆ.ಶೈಲಾ ಅವರನ್ನು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಿಲ್ಪಾ ಅವರ ಅಪೂರ್ವ ಕ್ರೀಡಾ ಸಾಧನೆಯನ್ನು ಶ್ಲಾಘಿಸಿದ ಸಚಿವರು, ಶ್ರಮ ಮತ್ತು ಅಚಲ ನಿರ್ಧಾರದಿಂದ ಸಾಧನೆ ಮಾಡಿದ ಅವರಿಗೆ ಶುಭ ಹಾರೈಸಿ, ಮುಂಬರುವ ಜಾಗತಿಕ ಕ್ರೀಡಾಕೂಟಗಳಲ್ಲಿ ದೇಶಕ್ಕೆ ಮತ್ತಷ್ಟು ಪದಕಗಳನ್ನು ತಂದುಕೊಡಲಿ ಎಂದು ಆಶಂಸಿಸಿದರು.
ಜನನ ಮತ್ತು ಬಾಲ್ಯ: ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ‘ಕಂಚುಗಾರಕೊಪ್ಪಲು’ ಗ್ರಾಮದ ಕೃಷಿ ಕುಟುಂಬದಲ್ಲಿ ಜನಿಸಿದ ಶಿಲ್ಪಾ ಅವರು, ತಮ್ಮ 4ನೇ ವಯಸ್ಸಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಡಗಾಲನ್ನು ಕಳೆದುಕೊಂಡರು.
ವಿದ್ಯಾಭ್ಯಾಸ ಮತ್ತು ವೃತ್ತಿಜೀವನ: ದೈಹಿಕ ಸವಾಲು ಮತ್ತು ಆರ್ಥಿಕ ಸಂಕಷ್ಟಗಳ ನಡುವೆಯೂ ಎಂ.ಎ. ಮತ್ತು ಬಿ.ಎಡ್. ಶಿಕ್ಷಣ ಪೂರ್ಣಗೊಳಿಸಿ, ಮೈಸೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದರು.
ಕ್ರೀಡಾ ಜಗತ್ತಿಗೆ ಪದಾರ್ಪಣೆ: 2019 ರಲ್ಲಿ ‘ಸಿಟ್ಟಿಂಗ್ ವಾಲಿಬಾಲ್’ ಮೂಲಕ ಕ್ರೀಡಾ ಕ್ಷೇತ್ರ ಪ್ರವೇಶಿಸಿದ ಇವರು, ನಂತರ ಕೋಚ್ ರಾಘವೇಂದ್ರ ಅವರ ಸಲಹೆಯಂತೆ ವೈಯಕ್ತಿಕ ವಿಭಾಗವಾದ ಪ್ಯಾರಾ-ಅಥ್ಲೆಟಿಕ್ಸ್ (ಶಾಟ್ಪುಟ್ ಮತ್ತು ಡಿಸ್ಕಸ್ ಎಸೆತ) ಗೆ ರಂಗಪ್ರವೇಶ ಮಾಡಿದರು. ಕ್ರೀಡೆಗಾಗಿ ತಮ್ಮ ಶಿಕ್ಷಕಿ ಉದ್ಯೋಗವನ್ನೂ ತೊರೆದರು.
ನವದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಶಿಲ್ಪಾ ಅವರನ್ನು ಗೌರವಿಸಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, “ಸಾಕಷ್ಟು ಕಷ್ಟ-ಸವಾಲುಗಳ ನಡುವೆಯೂ ದೃಢ ನಿರ್ಧಾರ ಮತ್ತು ಕಠಿಣ ಶ್ರಮದಿಂದ ಈ ಮಟ್ಟಕ್ಕೆ ಬೆಳೆದು ನಿಂತಿರುವ ಶಿಲ್ಪಾ ಅವರ ಸಾಧನೆ ಸಮಾಜಕ್ಕೆ ಮತ್ತು ಯುವ ಕ್ರೀಡಾಪಟುಗಳಿಗೆ ದಾರಿದೀಪ. ಮುಂಬರುವ ಪ್ಯಾರಾ ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ನಲ್ಲೂ ಅವರು ದೇಶಕ್ಕೆ ಮತ್ತಷ್ಟು ಕೀರ್ತಿ ತರಲಿ” ಎಂದು ಶ್ಲಾಘಿಸಿದರು.



