ಕ್ರಷರ್ ಲಾರಿಗಳ ಅತಿಯಾದ ಸಂಚಾರಕ್ಕೆ ರಸ್ತೆ ಸಂಪೂರ್ಣ ಧ್ವಂಸ: ನಿಲುವಾಡಿ ಗ್ರಾಮಸ್ಥರಿಂದ ಲಾರಿ ತಡೆದು ಭಾರಿ ಪ್ರತಿಭಟನೆ!

ಪಿರಿಯಾಪಟ್ಟಣ: ತಾಲೂಕಿನ ನಿಲುವಾಡಿ ಗ್ರಾಮದಲ್ಲಿ ಕ್ರಷರ್ ಲಾರಿಗಳ ಅತಿಯಾದ ಸಂಚಾರದಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆಯಲ್ಲೇ ಲಾರಿಗಳನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿದಿನ ನಿಯಮ ಮೀರಿ ಮಿತಿಮೀರಿದ ಭಾರದೊಂದಿಗೆ ಚಲಿಸುವ ಕ್ರಷರ್ ಲಾರಿಗಳಿಂದಾಗಿ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಗುಂಡಿಬಿದ್ದು ಧ್ವಂಸಗೊಂಡಿದೆ. ಇದರಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಪ್ರತಿನಿತ್ಯ ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ. ಧೂಳಿನ ಹಾವಳಿಯಿಂದ ಸುತ್ತಮುತ್ತಲ ನಿವಾಸಿಗಳ ಆರೋಗ್ಯದ ಮೇಲೆಯೂ ತೀವ್ರ ದುಷ್ಪರಿಣಾಮ ಬೀರುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
”ರಸ್ತೆ ದುರಸ್ತಿ ಮಾಡದಿದ್ದರೆ ಹೋರಾಟ ತೀವ್ರ”
“ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಎಚ್ಚೆತ್ತುಕೊಂಡು ಹಾಳಾಗಿರುವ ರಸ್ತೆಯನ್ನು ಸುಸಜ್ಜಿತವಾಗಿ ದುರಸ್ತಿಗೊಳಿಸಬೇಕು. ಕಲ್ಲು ಮತ್ತು ಜಲ್ಲಿ ಹೊರುವ ಕ್ರಷರ್ ಲಾರಿಗಳ ಅನಿಯಂತ್ರಿತ ಸಂಚಾರಕ್ಕೆ ತಡೆ ಒಡ್ಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು.”
— ನಿಲುವಾಡಿ ಗ್ರಾಮಸ್ಥರ ಎಚ್ಚರಿಕೆ
ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲವು ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಹಾಗೂ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.



