ತಾಳಕನಕಾಪುರ ಗ್ರಾಮದ ಅಲೆಮಾರಿ ಕುಟುಂಬಗಳ ಮನೆಗಳಿಗೆ ಕೊಪ್ಪಳ ತಾ.ಪಂ ಇಓ ಭೇಟಿ: ಮತದಾರರ ಪಟ್ಟಿ ಪರಿಷ್ಕರಣೆ (SIR) ಜಾಗೃತಿ

ಕೊಪ್ಪಳ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (SIR) ಅಂಗವಾಗಿ, ಕೊಪ್ಪಳ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಳಕನಕಾಪುರ ಗ್ರಾಮದ (ಭಾಗ ಸಂ.40) ಅಲೆಮಾರಿ ಕುಟುಂಬಗಳ ಮನೆಗಳಿಗೆ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ (EO) ದುಂಡಪ್ಪ ತುರಾದಿ ಅವರು ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಈ ವೇಳೆ ಮಾತನಾಡಿದ ತಾ.ಪಂ ಇಓ ಅವರು, “ಕುಟುಂಬದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಹಾಗೂ ಮರಣ ಹೊಂದಿದವರು, ಸ್ಥಳಾಂತರಗೊಂಡವರು ಮತ್ತು ನಕಲಿ ಹೆಸರುಗಳನ್ನು ಪರಿಶೀಲಿಸಿ ಪಟ್ಟಿಯಿಂದ ತೆಗೆದುಹಾಕುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ” ಎಂದು ತಿಳಿಸಿದರು.
ಅಲೆಮಾರಿ ಕುಟುಂಬದ ಸ್ವಾರೆಮ್ಮ ದ್ಯಾಮಣ್ಣ ಪರಿಯವರ ಮನೆಗೆ ಭೇಟಿ ನೀಡಿದಾಗ, ಅವರು ತಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟವರ ಮಾಹಿತಿಯನ್ನು ಭರ್ತಿ ಮಾಡಿದ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿಗೆ ಹಸ್ತಾಂತರಿಸಿದರು. ಅಲೆಮಾರಿ ಕುಟುಂಬಗಳ ಯಾವುದೇ ಅರ್ಹ ಸದಸ್ಯರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಜಾಗರೂಕತೆ ವಹಿಸಲು ಬಿಎಲ್ಒಗಳಿಗೆ ಇಓ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಬಸವರಡ್ಡಿ ತವದಿ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಬೂತ್ ಮಟ್ಟದ ಅಧಿಕಾರಿ (BLO) ಮರ್ದಾನಬೀ, ಗ್ರಾ.ಪಂ ಡಿಇಒ ಕುಮಾರ ಪರಗಿ ಹಾಗೂ ತಾಂಡಾ ರೋಜಗಾರ್ ಮಿತ್ರ ಯಮನೂರಪ್ಪ ಉಪಸ್ಥಿತರಿದ್ದರು.



