ಸೌದೆ ಮರ ಮಾರಾಟ ವಿಚಾರಕ್ಕೆ ಕಿರಿಕ್ – ವೃದ್ಧೆಗೆ ಮಚ್ಚಿನಿಂದ ಹಲ್ಲೆ, ಮೂವರ ವಿರುದ್ಧ ಎಫ್ಐಆರ್

ನಂಜನಗೂಡು: ಸೌದೆ ಮರ ಮಾರಾಟ ಮಾಡುವ ವಿಚಾರದಲ್ಲಿ ಉಂಟಾದ ಗಲಾಟೆಯಿಂದ ಮೂವರು ಯುವಕರು ವೃದ್ಧೆಯೊಬ್ಬರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಭಾಗ್ಯಮ್ಮ (66) ಎಂಬ ವೃದ್ಧೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜುಲೈ 22ರಂದು ಭಾಗ್ಯಮ್ಮ ಅವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಸೌದೆ ಮರಗಳನ್ನು ಸುಂದ್ರಪ್ಪ ಎಂಬುವರಿಗೆ ಮಾರಾಟ ಮಾಡಿದ್ದರು. ಸುಂದ್ರಪ್ಪ ಅವರು ಮರಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಜಯಂತ್, ಮಾದೇಶ ಹಾಗೂ ನಟರಾಜು ಎಂಬ ಯುವಕರು, “ನಮಗೆ ಸೇರಿದ ಮರಗಳನ್ನು ಹೇಗೆ ಮಾರಾಟ ಮಾಡುತ್ತೀಯ?” ಎಂದು ಭಾಗ್ಯಮ್ಮ ಅವರ ಬಳಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಆರೋಪಿಗಳು ಮಚ್ಚಿನಿಂದ ವೃದ್ಧೆಯ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ.
ಹಲ್ಲೆಗೊಳಗಾದ ವೃದ್ಧೆ ಭಾಗ್ಯಮ್ಮ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಜಯಂತ್, ಮಾದೇಶ ಹಾಗೂ ನಟರಾಜು ಎಂಬ ಮೂವರು ಯುವಕರ ವಿರುದ್ಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



