ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಮಹಿಳೆಯರ ಶೋಷಣೆ ಹಾಗೂ ಅತ್ಯಾಚಾರ ಆರೋಪದ ಮೇಲೆ ಸಮಗ್ರ ತನಿಖೆಗೆ ಒತ್ತಾಯ

ಬೆಂಗಳೂರು: ಹುಬ್ಬಳ್ಳಿಯ ಜಿಮ್ ಟ್ರೇನರ್ ಸಮೀರ್ ನಡೆಸಿದ್ದಾನೆನ್ನಲಾದ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ, ಅತ್ಯಾಚಾರ ಹಾಗೂ ಮತಾಂತರ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ವಿಭಾಗವು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ರಣರಾಗಿಣಿ ಶಾಖೆಯ ಭವ್ಯ ಗೌಡ ಅವರು ಮಾತನಾಡಿ, ಜಿಮ್ ನಡೆಸುತ್ತಿರುವ ಆರೋಪಿ ಸಮೀರ್ ಮುಲ್ಲಾ ಮಹಿಳೆಯರೊಂದಿಗೆ ಸ್ನೇಹದ ನೆಪದಲ್ಲಿ ನಿಕಟವಾಗಿ, ಮದ್ದು ಬೆರೆಸಿದ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿ ಮಹಿಳೆಯರನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ದಂಧೆಯಲ್ಲಿ ತೈಸೀಮ್ ಮುಲ್ಲಾ ಎಂಬಾಕೆ ಯುವತಿಯರನ್ನು ಜಾಲಕ್ಕೆ ಸೆಳೆಯಲು ಸಹಕರಿಸುತ್ತಿದ್ದಾಳೆ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ.
ವಿಶೇಷ ತನಿಖಾ ದಳ (SIT): ಪ್ರಕರಣದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಕೂಡಲೇ ವಿಶೇಷ ತನಿಖಾ ದಳವನ್ನು ರಚಿಸಿ ಸಮಗ್ರ ತನಿಖೆ ನಡೆಸಬೇಕು.
ಕಠಿಣ ಕ್ರಮ: ಆರೋಪಿಗಳ ವಿರುದ್ಧ ಅತ್ಯಂತ ಕಠಿಣ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ದಾಖಲಿಸಬೇಕು.
ಜಿಮ್ಗಳ ಮೇಲ್ವಿಚಾರಣೆ: ಮಹಿಳೆಯರು ಭೇಟಿ ನೀಡುವ ಜಿಮ್ ಹಾಗೂ ಫಿಟ್ನೆಸ್ ಕೇಂದ್ರಗಳ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು.
ಪೀಡಿತರ ಸುರಕ್ಷತೆ: ಪ್ರಕರಣದಲ್ಲಿ ಸಂತ್ರಸ್ತರಾದ ಮಹಿಳೆಯರ ಗೌಪ್ಯತೆಯನ್ನು ಕಾಪಾಡಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳ ಮೊಬೈಲ್ನಲ್ಲಿ ಆಕ್ಷೇಪಾರ್ಹ ಚಿತ್ರಗಳು ಪತ್ತೆಯಾಗಿದ್ದು, ಇನ್ನುಳಿದ ಪೀಡಿತರು ಧೈರ್ಯವಾಗಿ ಮುಂದೆ ಬಂದು ದೂರು ನೀಡುವಂತೆ ಸಂಘಟನೆ ಮನವಿ ಮಾಡಿದೆ. ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸದಂತೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ರಣರಾಗಿಣಿ ವಿಭಾಗವು ಆಗ್ರಹಿಸಿದೆ.



