ತಾಲೂಕುಜಿಲ್ಲಾ ಸುದ್ದಿರಾಜ್ಯ ಸುದ್ದಿಸ್ಥಳೀಯ ಸುದ್ದಿಗಳು

ಸಾವಿನ ದವಡೆಯಿಂದ ಮಗುವನ್ನು ಎಳೆತಂದ ಸಾಹಸಿ: ಶಿರಸಿಯಲ್ಲಿ ಎದೆಝಲ್ಲೆನಿಸುವ ರಕ್ಷಣಾ ಕಾರ್ಯಾಚರಣೆ!

Share News

ಶಿರಸಿ: ಆಟವಾಡುತ್ತಿದ್ದ ಎರಡು ವರ್ಷದ ಹಸುಗೂಸು ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದರೂ, ವ್ಯಕ್ತಿಯೊಬ್ಬರ ಸಮಯಪ್ರಜ್ಞೆ ಮತ್ತು ಅದಮ್ಯ ಸಾಹಸದಿಂದಾಗಿ ಪುನರ್ಜನ್ಮ ಪಡೆದ ಘಟನೆ ನಗರದ ಕಸ್ತೂರಬಾ ನಗರದಲ್ಲಿ ಸೋಮವಾರ ನಡೆದಿದೆ.

ಕಸ್ತೂರಬಾ ನಗರದ ನಿವಾಸಿಗಳಾದ ‘ಭುವಿ’ ಎಂಬ ಎರಡು ವರ್ಷದ ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಳು. ಮಗುವಿಗೆ ಊಟ ತರಲು ಅಜ್ಜಿ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ. ಅಜ್ಜಿ ಹೊರಬಂದು ನೋಡಿದಾಗ ಮಗು ಕಾಣದಿದ್ದಾಗ ಆತಂಕಗೊಂಡಿದ್ದಾರೆ. ಮನೆಯ ಸುತ್ತಮುತ್ತ ಹುಡುಕಾಡಿದಾಗ, ಹಿಂದಿನ ಬಾವಿಯೊಳಗಿನಿಂದ ಮಗುವಿನ ಅಳುವಿನ ಧ್ವನಿ ಕೇಳಿಬಂದಿದೆ. ಕೂಡಲೇ ಇಣುಕಿ ನೋಡಿದಾಗ ಮಗು ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಲ್ಲಿರುವುದು ಕಂಡುಬಂದಿದೆ.

ಅಜ್ಜಿಯ ಆಕ್ರಂದನ ಕೇಳಿ ಸ್ಥಳೀಯರು ಧಾವಿಸಿ ಬಂದಿದ್ದಾರೆ. ಈ ವೇಳೆ ಬೆಂಗಳೂರಿಗೆ ಪ್ರಯಾಣ ಬೆಳೆಸಲು ಸಿದ್ಧರಾಗಿದ್ದ ಸಾರಿಕಾ ಟ್ರಸ್ಟ್‌ನ ಸಂಸ್ಥಾಪಕ ಪಯ್ಯು ಚೌಟಿ ಅವರಿಗೆ ವಿಷಯ ತಿಳಿದಿದೆ. ಒಂದು ಕ್ಷಣವೂ ತಡಮಾಡದ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ತನ್ನ ಪ್ರಾಣದ ಹಂಗು ತೊರೆದು, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಆಳವಾದ ಬಾವಿಗೆ ಇಳಿದಿದ್ದಾರೆ.

ಸರಿಸುಮಾರು ಅರ್ಧ ಗಂಟೆಯ ಕಾಲ ನಡೆದ ಸತತ ಕಾರ್ಯಾಚರಣೆಯ ನಂತರ, ಮಗು ಭುವಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮಗು ಬಾವಿಗೆ ಬಿದ್ದ ಐದೇ ನಿಮಿಷದಲ್ಲಿ ಪತ್ತೆಯಾದದ್ದು ಮತ್ತು ಪೈಪ್ ಹಿಡಿದುಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಅವರು ನಮ್ಮ ಪಾಲಿನ ಪುಣ್ಯಾತ್ಮ. ಸಾಕ್ಷಾತ್ ದೇವರಂತೆ ಬಂದು ನನ್ನ ಕಂದನನ್ನು ಉಳಿಸಿಕೊಟ್ಟರು.”

— ಮಗುವಿನ ಅಜ್ಜಿ (ಕಣ್ಣೀರು ಹಾಕುತ್ತಾ)

“ಆ ಕ್ಷಣದಲ್ಲಿ ಮಗುವಿನ ಪ್ರಾಣ ಉಳಿಸುವುದಷ್ಟೇ ನನ್ನ ಗುರಿಯಾಗಿತ್ತು. ಮಗು ಕ್ಷೇಮವಾಗಿರುವುದು ನನಗೆ ಅತೀವ ಸಂತೋಷ ತಂದಿದೆ.”

— ಪಯ್ಯು ಚೌಟಿ, ಮಗುವನ್ನು ರಕ್ಷಿಸಿದ ಆಪದ್ಬಾಂಧವ

ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಬಾವಿಗಿಳಿದು ಕಂದಮ್ಮನ ಜೀವ ಉಳಿಸಿದ ಪಯ್ಯು ಚೌಟಿ ಅವರ ಸಾಹಸಕ್ಕೆ ಶಿರಸಿ ಜನತೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.


Share News

Related Articles

Leave a Reply

Your email address will not be published. Required fields are marked *

Back to top button
error: Content is protected !!