ಕೋಲಾರದಲ್ಲಿ ಭೀಕರ ದುರಂತ: ಮುದುವಾಡಿ ಕೆರೆಗೆ ಕಾರು ಬಿದ್ದು ರೈತ ಮುಖಂಡ ವೆಂಕಟೇಶ್ ಸಾವು!

ಕೋಲಾರ: ರಾಜ್ಯ ಹೆದ್ದಾರಿಯಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ ಸಂದಿದೆ. ಕರ್ನಾಟಕ ಪ್ರಾಂತ ರೈತ ಸಂಘದ (KPRS) ಜಿಲ್ಲಾಧ್ಯಕ್ಷ ಹಾಗೂ ಸಿಪಿಎಂ ಮುಖಂಡ ಟಿ.ಎಂ. ವೆಂಕಟೇಶ್ ಅವರು ಸಂಚರಿಸುತ್ತಿದ್ದ ಕಾರು ಮುದುವಾಡಿ ಕೆರೆಗೆ ಬಿದ್ದ ಪರಿಣಾಮ, ಅವರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಕೋಲಾರದಲ್ಲಿ ಆಯೋಜಿಸಲಾಗಿದ್ದ ರೈತ ಸಂಘದ ರಾಜ್ಯ ಸಮ್ಮೇಳನದ ಸಿದ್ಧತೆಗಾಗಿ ವೆಂಕಟೇಶ್ ಅವರು ಶುಕ್ರವಾರ ರಾತ್ರಿ 1.30ರವರೆಗೂ ನಗರದಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಕೆಲಸ ಮುಗಿಸಿ ತಮ್ಮ ಗ್ರಾಮವಾದ ತೊರಾಂಡಹಳ್ಳಿಗೆ ಇಂಡಿಕಾ ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಕೋಲಾರ-ಶ್ರೀನಿವಾಸಪುರ ಮುಖ್ಯ ರಸ್ತೆಯ (ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ) ಮುದುವಾಡಿ ಕೆರೆಯ ತಿರುವಿನಲ್ಲಿ ಕಾರು ಆಯತಪ್ಪಿ ನೇರವಾಗಿ ಕೆರೆಗೆ ಬಿದ್ದಿದೆ. ರಾತ್ರಿಯಾದ್ದರಿಂದ ಯಾರಿಗೂ ಈ ವಿಷಯ ತಿಳಿದಿಲ್ಲ. ಶನಿವಾರ ಬೆಳಿಗ್ಗೆ ವೆಂಕಟೇಶ್ ಅವರು ಮನೆಗೆ ಬಾರದೆ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯ ಏರಿಯ ಮೇಲೆ ಕಾರಿನ ಮಡ್ಗಾರ್ಡ್ ಮತ್ತು ನಂಬರ್ ಪ್ಲೇಟ್ ಬಿದ್ದಿರುವುದು ಹಾಗೂ ನೀರಿನಲ್ಲಿ ಡೀಸೆಲ್ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಕೂಡಲೇ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ.
ಈ ದುರಂತಕ್ಕೆ ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ:
ತಡೆಗೋಡೆ ಇಲ್ಲದ ರಸ್ತೆ: ಜಿಲ್ಲೆಯಲ್ಲೇ ದೊಡ್ಡದಾದ ಮುದುವಾಡಿ ಕೆರೆಯ ಏರಿಯ ಮೇಲೆ ಸಾಗುವ ಈ ರಸ್ತೆಗೆ ಯಾವುದೇ ತಡೆಗೋಡೆ (Safety Barrier) ಇಲ್ಲ.
ಕಿರಿದಾದ ರಸ್ತೆ: ಸಾವಿರಾರು ವಾಹನಗಳು ಸಂಚರಿಸುವ ರಾಜ್ಯ ಹೆದ್ದಾರಿಯಾಗಿದ್ದರೂ ರಸ್ತೆ ತೀರಾ ಕಿರಿದಾಗಿದೆ.
ಅಪಘಾತದ ಅನುಮಾನ: ಕಾರು ತಾನಾಗಿಯೇ ಆಯತಪ್ಪಿ ಬಿದ್ದಿದೆಯೇ ಅಥವಾ ಯಾವುದಾದರೂ ವಾಹನ ಡಿಕ್ಕಿ ಹೊಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಮ್ಮ ಜೀವನದುದ್ದಕ್ಕೂ ರೈತರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದ ವೆಂಕಟೇಶ್ ಅವರ ಸಾವು ಜಿಲ್ಲೆಯ ಜನತೆಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ. “ಒಂದು ವೇಳೆ ಅಲ್ಲಿ ತಡೆಗೋಡೆ ಇದ್ದಿದ್ದರೆ ಇಂದು ವೆಂಕಟೇಶ್ ಬದುಕಿರುತ್ತಿದ್ದರು” ಎಂದು ಸ್ಥಳೀಯರು ಕಣ್ಣೀರು ಹಾಕಿದ್ದಾರೆ. ಇನ್ಮುಂದಾದರೂ ಸರ್ಕಾರ ಎಚ್ಚೆತ್ತು ರಸ್ತೆ ಅಗಲೀಕರಣ ಮತ್ತು ತಡೆಗೋಡೆ ನಿರ್ಮಾಣಕ್ಕೆ ಮುಂದಾಗುವುದೇ ಕಾದು ನೋಡಬೇಕಿದೆ.
ವರದಿ :- ಆಂಟೋನಿ ಪತ್ರಕರ್ತ



