ಕಲಬುರಗಿ: ಇನ್ನು ಮುಂದೆ ಬರೀ ‘ತೊಗರಿ ಕಣಜ’ವಲ್ಲ, ಇದು ‘ಸಿರಿಧಾನ್ಯ ಮತ್ತು ಕೃಷಿ ಹಬ್’!

ಕಲಬುರಗಿ ಜಿಲ್ಲೆಯ ಕೃಷಿ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಆಯೋಜಿಸಿದ್ದ ‘ಸಿರಿಧಾನ್ಯ ಮೇಳ-2026’ ಮತ್ತು ಬೆಳೆ ವಿಮೆ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಿಲ್ಲೆಯ ಸಮಗ್ರ ಕೃಷಿ ಅಭಿವೃದ್ಧಿಯ ನೀಲಿ ನಕ್ಷೆಯನ್ನು ಬಿಚ್ಚಿಟ್ಟಿದ್ದಾರೆ.
ಜಿಲ್ಲೆಯ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಹಲವು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ:
ಅಗ್ರಿಟೆಕ್ ಎಕ್ಸಲರೇಟರ್ ಸೆಂಟರ್: ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಮತ್ತು ಯೋಗ್ಯ ಬೆಲೆ ಕೊಡಿಸಲು ಈ ಅತ್ಯಾಧುನಿಕ ಕೇಂದ್ರ ಸ್ಥಾಪನೆಯಾಗುತ್ತಿದೆ.
ತಾಂತ್ರಿಕ ಸೌಲಭ್ಯ: ಈಗಾಗಲೇ ಜಿಲ್ಲೆಯಲ್ಲಿ 9 ಕಸ್ಟಮರ್ ಹೈರ್ ಸೆಂಟರ್ಗಳು, ಡ್ರೋನ್ ಸಿಂಪರಣಾ ಕೇಂದ್ರ ಹಾಗೂ ಸಿರಿಧಾನ್ಯ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಶೀಥಲೀಕರಣ ಘಟಕ (Cold Storage) ಸ್ಥಾಪನೆಯಾಗಲಿದೆ.
ಕಲಬುರಗಿ ರೊಟ್ಟಿ ಕೆನಡಿ: ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ತಂದ ಈ ಯೋಜನೆಯಡಿ ಯಂತ್ರಗಳ ಮೂಲಕ ಸಾವಿರಾರು ರೊಟ್ಟಿ ತಯಾರಿಸಿ ಅಂತರಾಷ್ಟ್ರೀಯ ಮಟ್ಟಕ್ಕೆ ರವಾನಿಸಲಾಗುತ್ತಿದೆ.
2025-26ನೇ ಸಾಲಿನಲ್ಲಿ 3.01 ಲಕ್ಷ ರೈತರು ಬೆಳೆ ವಿಮೆ ನೋಂದಣಿ ಮಾಡಿಸುವ ಮೂಲಕ ಕಲಬುರಗಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ.
ತಮ್ಮ ವಿರುದ್ಧದ ಪ್ರತಿಭಟನೆಗಳಿಗೆ ಉತ್ತರಿಸಿದ ಸಚಿವರು, “ಕೇಂದ್ರ ಸರ್ಕಾರ ಬರ ಪರಿಹಾರ ನೀಡದಿದ್ದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ರೈತರಿಗೆ ನ್ಯಾಯ ಕೊಡಿಸಿದ್ದು ನಮ್ಮ ಸರ್ಕಾರ. ಶಾಲಿನ ಬಣ್ಣ ಬದಲಿಸುವವರು ನಿಜವಾದ ರೈತರಲ್ಲ,” ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.
ವೇದಿಕೆಯಲ್ಲೇ ಕೇಳಿಬಂದ ‘ಖುಷಿಯ ಸಂದೇಶ’:
ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಹಲವು ರೈತರ ಮೊಬೈಲ್ಗೆ ಬೆಳೆ ವಿಮೆ ಹಣ ಜಮೆಯಾದ ಬಗ್ಗೆ ಬ್ಯಾಂಕ್ ಸಂದೇಶಗಳು ಬಂದಿದ್ದು ವಿಶೇಷವಾಗಿತ್ತು. ಬಸವರಾಜ ದೇವನೂರು ಎಂಬ ರೈತರು ಬರೋಬ್ಬರಿ 14 ಲಕ್ಷ ರೂಪಾಯಿ ವಿಮೆ ಪರಿಹಾರ ಪಡೆದು ಅಚ್ಚರಿ ಮೂಡಿಸಿದರು.
ಜೇವರ್ಗಿಯ ಪರಶುರಾಮ್ ಅವರಿಗೆ ‘ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಲಬುರಗಿ ರೊಟ್ಟಿ ತಯಾರಿಕೆಯಲ್ಲಿ ಸಾಧನೆ ಮಾಡಿದ ಐವರು ಮಹಿಳೆಯರನ್ನು ಸನ್ಮಾನಿಸಲಾಯಿತು.
HDFC ಬ್ಯಾಂಕ್ ವತಿಯಿಂದ ಪ್ಯಾಕಿಂಗ್ ಮಷೀನ್ ಖರೀದಿಸಲು ₹ 55 ಲಕ್ಷ CSR ಫಂಡ್ ಚೆಕ್ ವಿತರಿಸಲಾಯಿತು.
ವರದಿ :- ಆಂಟೋನಿ ಪತ್ರಕರ್ತ



